ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಕ್ರೀಡಾ ಇಲಾಖೆಯಿಂದ ಸನ್ಮಾನ, 15 ಲಕ್ಷ ರೂ.ನ ಚೆಕ್ ವಿತರಣೆ

Update: 2018-08-28 12:59 GMT

ಬೆಂಗಳೂರು, ಆ.28: 18ನೆ ಏಶ್ಯನ್ ಗೇಮ್ಸ್‌ನ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಪೊಲೀಸ್ ಪೇದೆ ಎನ್.ಉಷಾರಾಣಿ ಅವರಿಗೆ ಇಲಾಖೆಯಲ್ಲಿ ‘ಬಿ ದರ್ಜೆ’ ಹುದ್ದೆ ನೀಡುವುದಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಮಂಗಳವಾರ ಸದಾಶಿವನಗರ ಬಿಡಿಎ ವಸತಿಗೃಹದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಉಷಾರಾಣಿ ಅವರನ್ನು ಮೈಸೂರು ಪೇಟಾ ಶಾಲು ಹೊದಿಸಿ 15 ಲಕ್ಷ ರೂ. ಚೆಕ್ ನೀಡಿ ಅಭಿನಂದಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪದಕ ಗೆದ್ದವರಿಗೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ನೀಡುವ ನಿಯಮಾವಳಿ ಸಡಿಲಗೊಳಿಸಲಾಗುತ್ತಿದ್ದು, ಉಷಾರಾಣಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಬಿ ದರ್ಜೆ ಹುದ್ದೆ ನೀಡಲಾಗುವುದೆಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಪೇದೆ ಆಗಿದ್ದ ಉಷಾರಾಣಿ ಅವರು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಹಿಂದೆಯೂ ಉಷಾರಾಣಿ, 2016ನೆ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಗೋಹಾತಿಯಲ್ಲಿ ನಡೆದ 12 ನೆ ದಕ್ಷಿಣ ಏಶ್ಯನ್ ಫೆಡರೇಷಿಯನ್ ಗೇಮ್ಸ್‌ನ ಕಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು ಎಂದು ತಿಳಿಸಿದರು.

ಏಷ್ಯನ್ ಕ್ರೀಡಾಕೂಟದಲ್ಲಿ ಟೆನ್ನಿಸ್ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿರುವ ರೋಹನ್ ಬೋಪಣ್ಣ ಹಾಗೂ ಫೌದ್ ಮಿರ್ಜಾ ಅವರಿಗೂ ಶೀಘ್ರವೇ ಇಲಾಖೆ ವತಿಯಿಂದ ಸನ್ಮಾನಿಸಲಾಗುವುದು.

ಈ ಸಂದರ್ಭದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಿಕೆ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News