ಕರುಣಾನಿಧಿಗೆ ಭಾರತರತ್ನ ನೀಡಲು ಆಗ್ರಹ
Update: 2018-08-28 14:51 GMT
ಚೆನ್ನೈ, ಆ.28: ಡಿಎಂಕೆಯ ಮಾಜಿ ಅಧ್ಯಕ್ಷ ಹಾಗೂ ಜನಪ್ರಿಯ ಮುಖಂಡರಾದ ಕರುಣಾನಿಧಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಡಿಎಂಕೆ ಒತ್ತಾಯಿಸಿದೆ.
ಇಲ್ಲಿ ನಡೆದ ಪಕ್ಷದ ಮಹಾಸಭೆಯಲ್ಲಿ ಈ ಕುರಿತ ನಿರ್ಣಯವನ್ನು ಡಿಎಂಕೆ ನಾಯಕ ತಿರುಚಿ ಶಿವ ಮಂಡಿಸಿದ್ದು ಇದನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಹಿಂದೆಯೇ ಡಿಎಂಕೆ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ್ದ ತಿರುಚಿ ಶಿವ, ಕರುಣಾನಿಧಿ ದೇಶದ ಮಹಾನ್ ನಾಯಕನಾಗಿದ್ದು ತಮ್ಮ ಜೀವನದ 80 ವರ್ಷಗಳನ್ನು ಸಾರ್ವಜನಿಕ ಪ್ರತಿನಿಧಿಯಾಗಿ ಕಳೆದಿದ್ದರು. ಅಲ್ಲದೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದ್ದರು. ಕರುಣಾನಿಧಿ ಆಗಸ್ಟ್ 7ರಂದು ನಿಧನರಾಗಿದ್ದರು.