ವಾರ್ಡ್‌ಗಳಲ್ಲಿನ ಕೆಲಸ ತಡವಾದರೆ ಆಯಾ ವಲಯದ ಜಂಟಿ ಆಯುಕ್ತರೇ ನೇರ ಹೊಣೆ: ಜಿ.ಪರಮೇಶ್ವರ್

Update: 2018-08-31 12:30 GMT

ಬೆಂಗಳೂರು, ಆ. 31: ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಲ್ಲಿನ ಆಡಳಿತ ವೈಖರಿ, ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತ ವೈಖರಿ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಎಂಟು ವಲಯ ಮಾಡಿದ್ದು, ಪ್ರತಿ ವಲಯಕ್ಕೂ ಜಂಟಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಈ ವಲಯದ ಸಂಪೂರ್ಣ ಜವಾಬ್ದಾರಿ ಇವರ ಮೇಲಿದೆ. ಇಲ್ಲಿಯ ಯಾವುದೇ ಕಾಮಗಾರಿ ತಡವಾದರೆ, ಇತರೆ ಏನೇ ಕೆಲಸ ಪೂರ್ಣಗೊಳ್ಳದಿದ್ದರೆ ಆಯಾ ವಲಯದ ಜಂಟಿ ಆಯುಕ್ತರನ್ನೇ ನೇರ ಹೊಣೆ ಮಾಡಲಾಗುವುದು. ಒಂದು ವೇಳೆ ಕಾನೂನಾತ್ಮಕ ತೊಡಕು ಇದ್ದರೆ ಅದನ್ನು ಆಯುಕ್ತರ ಗಮನಕ್ಕೆ ತರಬೇಕು. ಇಲ್ಲವೇ ಅದಕ್ಕೂ ನೀವೆ ಹೊಣೆಯಾಗುತ್ತೀರಿ ಎಂದು ಹೇಳಿದರು.

ಕುಡಿಯುವ ನೀರು, ಒಳಚರಂಡಿ, ರಸ್ತೆ, ಕಸ ವಿಲೇವಾರಿ, ಸರಕಾರಿ ಯೋಜನೆ ಸಮರ್ಪಕವಾಗಿ ಜನರಿಗೆ ತಲುಪಿಸುವ ಹೊಣೆ ಇವರ ಮೇಲಿರುತ್ತದೆ. ಈ ವಲಯದಲ್ಲಿ ಆಡಳಿತ ವೈಖರಿ ಇನ್ನಷ್ಟು ಚುರುಕುಗೊಳ್ಳಬೇಕು. ಮೂರು ವರ್ಷದಿಂದ ಸಾಕಷ್ಟು ಕಾಮಗಾರಿ ಬಾಕಿ ಇದೆ. ಶೀಘ್ರವೇ ಮುಗಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಹುತೇಕ ಕಾಮಗಾರಿಗಳು ಅವಧಿ ಮುಗಿದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಯಾವುದೇ ಕಾಮಗಾರಿಯಾಗಲಿ ಅದಕ್ಕೆ ಅವಧಿ ನಿಗದಿ ಮಾಡಿ, ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿ. ಇಲ್ಲವೇ, ಅವರ ಟೆಂಡರ್ ರದ್ದುಪಡಿಸಿ ಎಂದು ತಾಕೀತು ಮಾಡಿದರು. ಇನ್ನು ದಾಸರಹಳ್ಳಿ ವಲಯದಲ್ಲಿ ಬಯೋಮೆಟ್ರಿಕ್ ಅಳವಡಿಸಿರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಶೀಘ್ರವೇ ಅಳವಡಿಸುವಂತೆಯೂ ಸೂಚನೆ ನೀಡಿದರು. ಪ್ರತಿ ವಲಯದಲ್ಲೂ ಒಒಡಿ ಮೇಲೆ ಸಾಕಷ್ಟು ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟವರೂ ಇದ್ದಾರೆ. ಇವರನ್ನೆಲ್ಲಾ ಆದಷ್ಟು ಬೇಗ ಅವರ ಇಲಾಖೆಗೆ ವಾಪಾಸ್ ಕಳುಹಿಸಿ, ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಜಂಟಿ ಆಯುಕ್ತರಿಗೆ ಕ್ಲಾಸ್

ದಾಸರಹಳ್ಳಿ ಬಿಬಿಎಂಪಿ ವಲಯಕ್ಕೆ ದಿಢೀರ್ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ವಲಯದ ಜಂಟಿ ಆಯುಕ್ತ ಕಚೇರಿಯಲ್ಲಿ ಇರಲಿಲ್ಲ. ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರು ಯಾವುದೋ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ತೆರಳಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಉತ್ತರ ನೀಡಿದರು. ಯಾವ ಪ್ರಕರಣ ? ಅವರಿಗೆ ಈಗಲೇ ಕರೆ ಮಾಡಿ ಎಂದು ಪರಮೇಶ್ವರ್ ಅವರು ತಾಕೀತು ಮಾಡಿದ ಬಳಿಕ ಕೆಲ ಸಮಯದಲ್ಲಿ ಜಂಟಿ ಆಯುಕ್ತರು ಕಚೇರಿಗೆ ಆಗಮಿಸಿದರು. ಇನ್ನೊಮ್ಮೆ ಈ ರೀತಿ ಮಾಡದಂತೆ ಅವರಿಗೆ ಎಚ್ಚರಿಕೆ ನೀಡಿದರು.

ಕಚೇರಿಯಲ್ಲಿ ಕೆಲ ಸಿಬ್ಬಂದಿ ಇರದೇ ಇದುದ್ದನ್ನೂ ಗಮನಿಸಿದ ಪರಮೇಶ್ವರ್ ಅವರು, ಆ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು. ಯಾವೆಲ್ಲಾ ಕಾಮಗಾರಿಗಳು ಚಾಲ್ತಿಯಲ್ಲಿವೆ, ಎಷ್ಟು ಅವಧಿಯಿಂದ ಬಾಕಿ ಇವೆ ಎಂಬ ಮಾಹಿತಿ ಪಡೆದರು. ಪ್ರತಿನಿತ್ಯ ಸಾರ್ವಜನಿಕರ ಅಹವಾಲು ಸ್ವೀಕರಿಸುವ ದಿನಚರಿ ಪರಿಶೀಲಿಸಿ, ಅಹವಾಲು ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡು, ಶೀಘ್ರವೇ ಸಾರ್ವಜನಿಕರಿಗೆ ಸ್ಪಂದಿಸುವಂತೆ ಸೂಚಿಸಿದರು. ಅಲ್ಲದೆ, ಸಿಬ್ಬಂದಿಯ ದಿನಚರಿಯನ್ನು ಪರಿಶೀಲಿಸಿದರು. ಕೆಲವರು ಬಹಳ ದಿನದಿಂದ ಸಹಿ ಹಾಕದೇ ಇರುವುದಕ್ಕೂ ಸಿಟ್ಟಿಗೆದ್ದರು.

ಸಮನ್ವಯ ಸಮತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಭಾಗಿ ಆಗುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದ ಕುರಿತು ಸಮಿತಿ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ಕೆಪಿಸಿಸಿ ಅಧ್ಯಕ್ಷರಿಗೆ ಇನ್ನೊಬ್ಬರು ಕಾರ್ಯಾ‌ಧ್ಯಕ್ಷರು ಬೇಕಿದ್ದರೆ ಅವರು ಹೈಕಮಾಂಡ್ ಅವರ ಗಮನಕ್ಕೆ ತಂದು ತೆಗೆದುಕೊಳ್ಳುತ್ತಾರೆ. ಇದು ಅವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್‌ಗಾಂಧಿ ಅವರು ಉತ್ತರ ಕರ್ನಾ‌ಟಕದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡ ಪ್ರಕರಣ ಕುರಿತು ಭದ್ರತಾ ಲೋಪದ ವರದಿ ನೀಡಲು ಕೇಂದ್ರ ಸರಕಾರ ತಡ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ದೂರು ದಾಖಲಾಗಿದೆ, ಕೇಂದ್ರದ ಡಿಜಿಸಿ ಅವರು ವರದಿ ಕೊಡಬೇಕು. ಇನ್ನೂ ಕೊಟ್ಟಿಲ್ಲ, ಯಾಕೆಂದು ಮಾಹಿತಿ ಇಲ್ಲ. ವರದಿ ಇಲ್ಲದೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News