ಗೌರಿ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಪಾತ್ರ ದೃಢಪಟ್ಟರೆ ನಿಷೇಧಕ್ಕೆ ಚಿಂತನೆ: ಡಿಸಿಎಂ ಪರಮೇಶ್ವರ್

Update: 2018-08-31 12:58 GMT

ಬೆಂಗಳೂರು,ಆ.31: ಸನಾತನ ಸಂಸ್ಥೆಯನ್ನು ನಿಷೇಧಿಸಿ, ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರೈ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯುವಂತೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ನೇತೃತ್ವದ ಗೌರಿ ಲಂಕೇಶ್ ಟ್ರಸ್ಟ್ ಸದಸ್ಯರು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. 

ಚುನಾವಣೆ ಸಂದರ್ಭದಲ್ಲಿ ಮತೀಯ ಸಂಘಗಳು ಗೆಲ್ಲಬಾರದು‌ ಎಂಬ ಶೀರ್ಷಿಯಲ್ಲಿ ರಾಜ್ಯಾದ್ಯಂತ ನಡೆಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ರೈ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ದೂರು ದಾಖಲಾಗಿವೆ. ಈ ಪ್ರಕರಣ ಅನಗತ್ಯವಾಗಿದ್ದು, ವಾಪಾಸ್ ತೆಗೆದುಕೊಳ್ಳಬೇಕೆಂದು ದೊರೆಸ್ವಾಮಿ ತಂಡ ಮನವಿ ಮಾಡಿತು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಗೌರಿ ಲಂಕೇಶ್ ಟ್ರಸ್ಟ್ ಸದಸ್ಯರು ನನ್ನನು ಭೇಟಿ ಮಾಡಿ ಸನಾತನ ಸಂಸ್ಥೆ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಈ ಸಂಸ್ಥೆ ಬಗ್ಗೆ ತನಿಖೆಯಾಗಿ, ಮಾಹಿತಿ ಪಡೆದು ಹತ್ಯೆಯಲ್ಲಿ ಭಾಗಿಯಾಗಿರುವ ಮಾಹಿತಿ ಖಚಿತವಾದ ಬಳಿಕ ನಿಷೇಧದ ಬಗ್ಗೆ ಚಿಂತಿಸುವುದಾಗಿ ತಿಳಿಸಿದರು. 

ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿರುವ ಬಗ್ಗೆ ದೊರೆಸ್ವಾಮಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಹತ್ಯೆಯಾಗಿ ಸೆ.5 ಕ್ಕೆ ಒಂದು ವರ್ಷ ತುಂಬಲಿದ್ದು, ಸಭೆ ಆಯೋಜಿಸಲಾಗಿದೆ. ಈ ಸಭೆಗೆ ರಕ್ಷಣೆ ಕೊಡುವಂತೆಯೂ ಮನವಿ ಮಾಡಿದ್ದಾರೆ. ಇಡೀ ದೇಶದಿಂದ ಗೌರಿ ಲಂಕೇಶ್ ಚಿಂತನೆಯಲ್ಲಿ ನಂಬಿಕೆ ಇರುವವರು ಭಾಗವಹಿಸಲಿದ್ದಾರೆ. ಹೀಗಾಗಿ ಅವರ ಸಭೆಗೆ ರಕ್ಷಣೆ ಕೊಡಲಿದ್ದೇವೆ ಎಂದರು. ಗೌರಿ ಲಂಕೇಶ್ ಹತ್ಯೆಯ ತನಿಖೆ ಇನ್ನೂ ತೀವ್ರಗತಿಯಲ್ಲಿ ಮಾಡಿ ಅಂತಿಮಗೊಳಿಸುವ ಭರವಸೆ ನೀಡಿದ್ದೇನೆ ಎಂದರು. 

ಈ ಸಂದರ್ಭ ಮಾಜಿ ಸಚಿವೆ ಲಲಿತ ನಾಯಕ್, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಅಮಿನ್ ಮಟ್ಟು ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News