ಗೌರಿ ಲಂಕೇಶ್ ಹತ್ಯಾ ದಿನ: ಕ್ಯಾಂಪಸ್ ಫ್ರಂಟ್ ವತಿಯಿಂದ 'ಪ್ರತಿರೋಧ ದಿನ'
ಬೆಂಗಳೂರು, ಸೆ. 5: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯಾ ದಿನವನ್ನು 'ಪತ್ರಿರೋಧ ದಿನ'ವನ್ನಾಗಿ ಬೆಂಗಳೂರಿನ ಎಂ.ಜಿ.ರಸ್ತೆ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತು.
ಪ್ರತಿರೋಧ ದಿನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ, 'ಗೌರಿ ಲಂಕೇಶ್ ಹಾಗೂ ವಿಚಾರವಾದಿಗಳನ್ನು ಕೊಂದಿರಬಹುದು ಆದರೆ ಅವರ ವಿಚಾರಗಳನ್ನು ಕೊಲ್ಲಲಾಗದು. ಅದನ್ನು ವಿದ್ಯಾರ್ಥಿ ಯುವ ಸಮೂಹ ಮುಂದುವರಿಸಲಿದೆ'. ಗೌರಿ ಲಂಕೇಶ್ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡವಿದೆ ಎಂದು ಇದೀಗಾಗಲೇ ತನಿಖೆಯಿಂದ ಬಹಿರಂಗಗೊಂಡಿದ್ದು, ಸನಾತನ ಸಂಸ್ಥೆಯನ್ನು ತಕ್ಷಣವಾಗಿ ನಿರ್ಭಂದಿಸುವಂತೆ ಮತ್ತು ಗೌರಿ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮುಂದೆ ತರುವಂತೆ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಈ ಸಂದರ್ಭ ಬೆಂಗಳೂರು ಜಿಲ್ಲಾಧ್ಯಕ್ಷ ಮುಬಾರಕ್, ಜಿಲ್ಲಾ ಕಾರ್ಯದರ್ಶಿ ಝುಭೈರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.