ಕಾರಾಗೃಹ ನಿರ್ವಹಣೆಯಲ್ಲಿ ಬದಲಾವಣೆಗೆ ಚಿಂತನೆ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-09-09 14:29 GMT

ಬೆಂಗಳೂರು,ಸೆ.9: ರಾಜ್ಯದ ವಿವಿಧ ಕಾರಾಗೃಹದಲ್ಲಿ ಮೂಲ ಬದಲಾವಣೆ ತರುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ‌ ಕೈದಿಗಳ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ಸೇರಿದಂತೆ ಕೆಲವೆಡೆ ಹೊಸ ಕಾರಾಗೃಹಗಳನ್ನು ಕಟ್ಟಲಾಗುತ್ತಿದೆ. ಈ ವೇಳೆ ಕೆಲ‌ ಬದಲಾವಣೆ ತರಲಾಗುತ್ತಿದೆ ಎಂದು ಹೇಳಿದರು.

ಇದುವರೆಗೂ 1334 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. 2015ರಿಂದ ಈವರೆಗೂ ಯಾವ ಖೈದಿಯನ್ನೂ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೆ ಗೃಹ ಸಚಿವನಾದ ಬಳಿಕ ಸನ್ನಡತೆ ಮೇಲೆ ಬಿಡುಗಡೆ ಮಾಡುವ ಕಾರ್ಯ ಮಾಡಲಾಗುತ್ತಿದೆ. 

ರಾಜ್ಯದಲ್ಲಿ ವಿವಿಧ ಕಾರಾಗೃಹದಲ್ಲಿ 14500 ಖೈದಿಗಳು ಬಂಧಿಯಾಗಿದ್ದಾರೆ. ಇದರಲ್ಲಿ ಬಹುತೇಕರು ಉದ್ದೇಶಪೂರ್ವಕವಾಗಿ ಜೈಲಿಗೆ ಬಂದಿರುವುದಿಲ್ಲ. ಆಕಸ್ಮಿಕವಾಗಿ ಅಥವಾ ಆ ಕ್ಷಣದಲ್ಲಾದ ತಪ್ಪಿನಿಂದ ಜೈಲಿಗೆ ಬಂದಿರುತ್ತಾರೆ. ಆ ನಂತರ ಅವರಿಗೆ ತಮ್ಮ ತಪ್ಪಿನ‌ ಅರಿವೂ ಆಗಿರುತ್ತದೆ. ಅಂಥವರ ನಡವಳಿಕೆ ಗಮನಿಸಿ‌ ಸರಕಾರ ಅವರನ್ನು ಬಿಡುಗಡೆ ಗೊಳಿಸಿ ಸಮಾಜದಲ್ಲಿ‌ ಬದುಕಲು‌ ಮತ್ತೊಂದು ಅವಕಾಶ ಕೊಡುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News