ಇಬ್ಬರು ಲಷ್ಕರ್ ಉಗ್ರರನ್ನು ಹತ್ಯೆ ಮಾಡಿದ ಸೇನೆ

Update: 2018-09-11 15:45 GMT

ಶ್ರೀನಗರ, ಸೆ.11: ಮಂಗಳವಾರ ಉತ್ತರ ಕಾಶ್ಮೀರದ ಹಂಡ್ವಾರದಲ್ಲಿ ಸೇನಾಪಡೆ ಲಷ್ಕರೆ ತಯ್ಯಿಬ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಖಚಿತ ಮಾಹಿತಿಯ ಆಧಾರದಲ್ಲಿ ಸೋಮವಾರ ರಾತ್ರಿ ಹಂಡ್ವಾರದ ಲಂಗಟೆಯ ಗಲೂರಾ ಪ್ರದೇಶದಲ್ಲಿ ಸೇನಾ ಪಡೆ ಕಾರ್ಯಾಚರಣೆಗಿಳಿದಿತ್ತು. ಈ ವೇಳೆ ಉಗ್ರರು ಸೇನಾಪಡೆಯ ಮೇಲೆ ಗುಂಡು ಹಾರಿಸಿದಾಗ ಯೋಧರು ಪ್ರತಿದಾಳಿ ನಡೆಸಿದರು. ಈ ವೇಳೆ ಇಬ್ಬರು ಉಗ್ರರು ಸೇನಾ ಗುಂಡಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆದ ಸ್ಥಳದಿಂದ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಂಡ್ವಾರದಲ್ಲಿ ಅಂತರ್ಜಾಲ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಹಂಡ್ವಾರ, ಮವರ್ ಮತ್ತು ಲಂಗಟೆ ವಲಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರ ಸಂಜೆಯ ಹೊತ್ತಿಗೆ ಶ್ರೀನಗರದ ಬದ್ದಮ್ ಪ್ರದೇಶದಲ್ಲಿ ಬಂದೂಕುಧಾರಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಶೇಕ್‌ಪೊರ ನಿವಾಸಿ ಅಬ್ದುಲ್ ಅಹದ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News