ಸಂಚಾರ ಪೊಲೀಸ್ ಮೇಲೆ ಹಲ್ಲೆ: ಆರೋಪಿ ಸೆರೆ
Update: 2018-09-12 13:43 GMT
ಬೆಂಗಳೂರು, ಸೆ.12: ಸಂಚಾರ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬನನ್ನು ಇಲ್ಲಿನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದ ಬಳಿ ಮಂಗಳವಾರ ರಾತ್ರಿ 8ರ ವೇಳೆ ಸಂಚಾರ ಸುಗಮಗೊಳಿಸುತ್ತಿದ್ದ, ವಿಜಯನಗರ ಸಂಚಾರ ಪೊಲೀಸ್ ಠಾಣೆ ಪೇದೆ ಶಶಿ ಕುಮಾರ್ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ರಂಗನಾಥ್ ಸೇರಿ ಮೂವರು, ಕೆನ್ನೆಗೆ ಬಾರಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿದ ಬಸವೇಶ್ವರ ನಗರ ಪೊಲೀಸರು, ಆರೋಪಿ ರಂಗನಾಥ್ನನ್ನು ಬಂಧಿಸಿ, ಉಳಿದಿಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ. ವಿಚಾರಣೆ ವೇಳೆ ರಂಗನಾಥ್, ಪೇದೆ ಶಶಿಕುಮಾರ್ ಬೈಕ್ನಲ್ಲಿ ಬಂದ ನಮ್ಮನ್ನು ನಿಲ್ಲಿಸಿ ವಿನಾಕಾರಣ ನಿಂದಿಸಿದರು. ಇದರಿಂದ ಆಕ್ರೋಶಗೊಂಡು ಹಲ್ಲೆ ನಡೆಸಿರುವುದಾಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.