ಕುಣಿಗಲ್: ಕ್ಯಾಂಟರ್ - ಕಾರು ಢಿಕ್ಕಿ; ಇಬ್ಬರು ಮೃತ್ಯು, 6 ಮಂದಿಗೆ ಗಂಭೀರ ಗಾಯ

Update: 2018-09-15 13:39 GMT

ಕುಣಿಗಲ್,ಸೆ.15: ಕ್ಯಾಂಟರ್ ಲಾರಿಯೊಂದು ತವೇರಾ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 6 ಮಂದಿ ತೀವ್ರವಾಗಿ ಗಾಯ ಗೊಂಡಿರುವ ಘಟನೆ ತಾಲೂಕಿನ ದೊಡ್ಡಮಾವತ್ತೂರು ಬಳಿ ಶನಿವಾರ ನಡೆದಿದೆ. 

ಮೃತಪಟ್ಟವರನ್ನು ತಮಿಳುನಾಡಿನ ಕೊಯಮತ್ತೂರು ಮೂಲದ ಚಿನ್ನಸ್ವಾಮಿ(60) ಮತ್ತು ಮನೋಜ್‍ಕುಮಾರ್ (30) ಎಂದು ಗುರುತಿಸಲಾಗಿದ್ದು, ಇವರು ಚನ್ನಪಟ್ಟಣದಿಂದ ತುಮಕೂರಿಗೆ ಹೆಣ್ಣು ನೋಡಲು ತವೇರಾ ಕಾರಿನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ತಾಲೂಕಿನ ಮದ್ದೂರು ರಾಜ್ಯ ಹೆದ್ದಾರಿ-33ರ ದೊಡ್ಡಮಾವತ್ತೂರು ಬಳಿ ತವೇರಾ ಕಾರಿಗೆ ಕ್ಯಾಂಟರ್ ಢಿಕ್ಕಿ ಹೊಡೆದಿದ್ದರಿಂದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರಿನಲ್ಲಿದ್ದ ಆಲ್‍ವಿನ್, ಸ್ಟೀಫನ್, ಯೋಗಿ, ಜಯಪ್ರಕಾಶ್ ಸೇರಿದಂತೆ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳು ಗಳನ್ನು ಚಿಕಿತ್ಸೆಗಾಗಿ ಕುಣಿಗಲ್ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. 

ಕ್ಯಾಂಟರ್ ಲಾರಿ ಕಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಕಂಡು ಬಂತು. ಅಪಘಾತದಿಂದಾಗಿ ಕುಣಿಗಲ್ -ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. 

ಸುದ್ದಿ ತಿಳಿದ ಕೂಡಲೇ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರ ತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ನಂತರ, ಸ್ಥಗಿತಗೊಂಡಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಸಂಬಂಧ ಪ್ರಕರಣ ದಾಖಲಿ ಸಿಕೊಂಡಿರುವ ಹುಲಿಯೂ ರುದುರ್ಗ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News