ಯುವಕನ ಅಪಹರಣ, ಹಲ್ಲೆ ಆರೋಪ: ನಟ ದುನಿಯಾ ವಿಜಯ್​ ಪೊಲೀಸ್ ವಶ

Update: 2018-09-23 07:38 GMT

ಬೆಂಗಳೂರು, ಸೆ.23: ಜಿಮ್​ ತರಬೇತುದಾರ ಮಾರುತಿ ಗೌಡ ಎಂಬವರನ್ನು ಅಪಹರಿಸಿ, ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಟ ದುನಿಯಾ ವಿಜಯ್​ ನನ್ನು ಹೈಗ್ರೌಂಡ್​ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಬಾಡಿ ಬಿಲ್ಡಿಂಗ್​ ಸ್ಪರ್ಧೆ ನೋಡಲು ಬಂದಿದ್ದ ನಟ ದುನಿಯಾ ವಿಜಯ್​ ಈ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಜಿಮ್​ ತರಬೇತುದಾರ ಪಾನಿಪುರಿ ಕಿಟ್ಟಿ ಜೊತೆಗೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತನ ಸಂಬಂಧಿ ಮಾರುತಿ ಗೌಡನನ್ನು ಅಪಹರಿಸಿ, ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಹಲ್ಲೆಗೊಳಗಾದ ಮಾರುತಿಯನ್ನು ಅಪಹರಿಸಿರುವ ಬಗ್ಗೆ ದುನಿಯಾ ವಿಜಯ್​ ವಿರುದ್ಧ ಹೈಗ್ರೌಂಡ್​ ಪೊಲೀಸ್​ ಠಾಣೆಯಲ್ಲಿ ಪಾನಿಪುರಿ ಕಿಟ್ಟಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 11.30ರ ಸುಮಾರಿಗೆ ದುನಿಯಾ ವಿಜಯ್​ನನ್ನು ಸಂಪರ್ಕ ಮಾಡಿದ್ದ ಹೈಗ್ರೌಂಡ್​ ಪೊಲೀಸರ ಆದೇಶದ ಮೇರೆಗೆ ಮಾರುತಿ ಗೌಡನ ಜೊತೆಗೆ ಅರ್ಧ ಗಂಟೆಯೊಳಗೆ ಪೊಲೀಸ್​ ಠಾಣೆಗೆ ಹಾಜರಾಗಿದ್ದಾರೆ. ದುನಿಯಾ ವಿಜಯ್​ಗೆ ಎಸಿಪಿ ರವಿಶಂಕರ್​ ಎಚ್ಚರಿಕೆ ನೀಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣ, ಹಲ್ಲೆ, ಕೊಲೆ ಬೆದರಿಕೆ ಆರೋಪದಡಿ ದುನಿಯಾ ವಿಜಯ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News