ಪಾವತಿಯಾಗದ ಸಾಲಗಳಿಗೆ ಯುಪಿಎ ಕಾರಣ: ನಿರ್ಮಲಾ ಸೀತಾರಾಮನ್ ಆರೋಪ
Update: 2018-10-10 14:00 GMT
ಚೆನ್ನೈ, ಅ. 10: ಸರಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕ್ಗಳು ದೊಡ್ಡ ಪ್ರಮಾಣದ ಪಾವತಿ ಆಗದ ಕಾರ್ಪೊರೇಟ್ ಸಾಲಗಳನ್ನು ಎದುರಿಸುತ್ತಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶ್ರದ್ಧೆ ವಹಿಸದೆ ಸಾಲ ನೀಡಲಾಗಿತ್ತು. ಇದರ ಪರಿಣಾಮ ಬಾಕಿದಾರರು ದೇಶ ಬಿಟ್ಟು ಪರಾರಿಯಾದರು. ಈಗ ಸಾಲ ನೀಡಲು ಬ್ಯಾಂಕ್ಗಳಲ್ಲಿ ಹಣವಿಲ್ಲ ಎಂದು ಸೀತಾರಾಮನ್ ದೇಶದಿಂದ ಪರಾರಿಯಾಗಿರುವ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಅವರಂತಹ ಉದ್ಯಮಿಗಳನ್ನು ಉಲ್ಲೇಖಿಸಿ ಹೇಳಿದರು. ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಬಿಕ್ಕಟ್ಟು ಎದುರಿಸುತ್ತಿವೆ. ಸಾಲ ನೀಡಲು ನೀತಿ ಅವಕಾಶ ನೀಡುತ್ತದೆ. ಆದರೆ, ಸಾಲ ನೀಡಲು ಬ್ಯಾಂಕ್ಗಳಲ್ಲಿ ಸಾಕಷ್ಟು ಹಣವಿಲ್ಲ ಎಂದು ಅವರು ಹೇಳಿದ್ದಾರೆ.