ಎಲೆಕ್ಟ್ರಿಕ್ ಬಸ್ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಸಮಗ್ರ ತನಿಖೆಗೆ ಕೆಎಸ್ಸಾರ್ಟಿಸಿ ವರ್ಕರ್ಸ್ ಫೆಡರೇಷನ್ ಒತ್ತಾಯ
Update: 2018-10-10 18:04 GMT
ಬೆಂಗಳೂರು, ಅ.10: ಕೆಎಸ್ಸಾರ್ಟಿಸಿ ಎಲೆಕ್ಟ್ರಿಕ್ ಬಸ್ಗಳ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಒತ್ತಾಯಿಸಿದೆ.
ಕಳೆದ ಸರಕಾರದ ಅವಧಿಯಲ್ಲಿ 80ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಟೆಂಡರ್ ಆಗಿತ್ತು. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಚಿವ ಡಿ.ಸಿ.ತಮ್ಮಣ್ಣ ಸಮಗ್ರ ತನಿಖೆಗೆ ಆದೇಶಿಸಿ, ಸಂಸ್ಥೆಯ ಪಾರದರ್ಶಕತೆಯನ್ನು ಎತ್ತಿಹಿಡಿಯಬೇಕು.
ಪ್ರಯಾಣಿಕರ ಹಣದಿಂದ ಸಾರಿಗೆ ಸಂಸ್ಥೆ ಮುನ್ನಡೆಯುತ್ತಿದೆ. ಇದರಲ್ಲಿ ಭ್ರಷ್ಟಾಚಾರ ನಡೆದರೆ ಜನತೆಗೆ ಮಾಡುವ ಅವಮಾನ ಆಗಿದೆ. ಹೀಗಾಗಿ ಸಾರಿಗೆ ಸಚಿವರು ನಿಸ್ಪಕ್ಷಪಾತವಾಗಿ ತನಿಖೆ ಒಳಪಡಿಸಿ, ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂದು ಪ್ರಕಟನೆಯಲ್ಲಿ ಒತ್ತಾಯಿಸಲಾಗಿದೆ.