ನಮ್ಮ ಒಮ್ಮತದ ಬಗ್ಗೆ ಯಡಿಯೂರಪ್ಪ, ಶೋಭಾ ವಿಶ್ಲೇಷಣೆ ಬೇಕಾಗಿಲ್ಲ: ಪರಮೇಶ್ವರ್ ತಿರುಗೇಟು

Update: 2018-10-17 12:36 GMT

ಬೆಂಗಳೂರು, ಅ. 17: ಮೂರು ಲೋಕಸಭೆ, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಈ ಐದೂ ಕ್ಷೆತ್ರಗಳಲ್ಲೂ ಎರಡೂ ಪಕ್ಷದವರ ಬೆಂಬಲವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜೆಡಿಎಸ್‌ನ ಬೆಂಬಲವಿದೆ. ನಮ್ಮ ಒಮ್ಮತದ ಬಗ್ಗೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ವಿಶ್ಲೇಷಣೆ ನಮಗೆ ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ಮೈತ್ರಿ ಸರಕಾರದಲ್ಲಿ ಯಾವುದೆ ವೈಯಕ್ತಿಕ ಪ್ರತಿಷ್ಠೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಉಪಚುನಾವಣೆಯಿಂದ ಐದು ಕ್ಷೇತ್ರದಲ್ಲಿಯೂ ಗೆಲ್ಲುವ ಮೂಲಕ ನಮ್ಮ ಮೈತ್ರಿ ಸರಕಾರ ಇನ್ನೂ ಬಲವಾಗಲಿದೆ ಎಂಬ ಸಂದೇಶ ರವಾನಿಸಲಿದ್ದೇವೆ. ಇದರಿಂದ ಬಿಜೆಪಿಯವರಿಗೆ ತೀವ್ರ ಮುಖಭಂಗವಾಗಲಿದೆ ಎಂದು ಹೇಳಿದರು.

ಬಳ್ಳಾರಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದ್ದರಿಂದ ವಿ.ಎಸ್.ಉಗ್ರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ಅದಕ್ಕಿಂತ ಮುಖ್ಯವಾಗಿ ಅವರು ನಮ್ಮ ಪಕ್ಷದ ಹಿರಿಯ ಮುಖಂಡರು. ಇಲ್ಲಿ ಜಾತಿವಾದ ಯಾವುದೂ ಇಲ್ಲ ಎಂದು ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರಿಪಡಿಸುವೆ: ದಸರಾ ಉತ್ಸವ ಪಕ್ಷಗಳನ್ನು ಮೀರಿ ನಡೆಯುತ್ತಿದ್ದು, ಈ ಉತ್ಸವದಲ್ಲಿ ಗಣ್ಯರ ಆಹ್ವಾನಿಸಲು ಉಸ್ತುವಾರಿ ಸಚಿವರು ಸಮಿತಿ ಮಾಡಿಲ್ಲವೆಂಬುದು ಗಮನಕ್ಕೆ ಬಂದಿದೆ. ಆದರೆ, ಸಮಿತಿ ರಚಿಸದೇ ಇರುವುದರಿಂದ ಕಾಂಗ್ರೆಸ್ ಕೆಲ ಮುಖಂಡರಲ್ಲಿ ಬೇಸರವಿದ್ದರೂ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News