ಶಕ್ತಿಕೇಂದ್ರ ವಿಧಾನಸೌಧದಲ್ಲಿ ಒಂದು ದಿನ ಮೊದಲೇ ಆಯುಧಪೂಜೆ ಸಡಗರ
Update: 2018-10-17 14:58 GMT
ಬೆಂಗಳೂರು, ಅ. 17: ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ ನಾಳೆ (ಅ.18) ನಾಡಿದ್ದು(ಅ.19) ಸರಕಾರಿ ರಜೆ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದಲ್ಲಿನ ಸಚಿವರ ಕಚೇರಿಗಳು ಸೇರಿದಂತೆ ಬಹುತೇಕ ಕಚೇರಿಗಳಿಗೆ ಇಂದೇ ವಿಶೇಷ ಪೂಜೆ ಸಲ್ಲಿಸಲಾಯಿತು.
ಬುಧವಾರ ಬೆಳಗ್ಗೆಯೇ ಹೊಸ ಬಟ್ಟೆ ಧರಿಸಿ ಆಗಮಿಸಿದ್ದ ವಿಧಾನಸೌಧದ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಿ ಬಣ್ಣ-ಬಣ್ಣದ ರಂಗೋಲೆಯನ್ನಿಟ್ಟು, ಬಾಳೆಕಂಬ, ಹೂವಿನ ಹಾರ, ತಳಿರು-ತೋರಣಗಳಿಂದ ಕಚೇರಿಗಳನ್ನು ಶೃಂಗಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಕಳ್ಳೆಪುರಿ(ಕಾರ-ಮಂಡಕ್ಕಿ), ಸಹಿ ಹಂಚಿ ಸಂಭ್ರಮಿಸಿದರು.
ಡಿಪಿಎಆರ್ ವಿಭಾಗದ ಸಿಬ್ಬಂದಿ ತಾವೇ ಪೇಯಿಂಟ್ ಮಾಡಿದ್ದ ಚಾಮುಂಡೇಶ್ವರಿ ದೇವಿಯ ದೊಡ್ಡ ಭಾವಚಿತ್ರವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಸಚಿವರು, ಶಾಸಕರ ಹಿಂಬಾಲಕರು ಹಾಗೂ ಸಾರ್ವಜನಿಕರಿಂದ ತುಂಬಿತುಳುಕುತ್ತಿದ್ದ ವಿಧಾನಸೌಧದಲ್ಲಿ ಬೂದುಗುಂಬಳ, ಕಾಯಿ, ಕರ್ಪೂರ, ಉದುಬತ್ತಿ ಪರಿಮಳದಿಂದ ಘಮಘಮಿಸುತ್ತಿತ್ತು.