ರಾಷ್ಟ್ರಪಿತನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ವಾಟಾಳ್ ನಾಗರಾಜ್ ಒತ್ತಾಯ
ಬೆಂಗಳೂರು, ಅ. 17: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೆ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕದಲ್ಲಿ ವಿಶ್ವವನ್ನೇ ಮೀರಿಸುವಂಥ ದೊಡ್ಡ ಪ್ರತಿಮೆ ಸ್ಥಾಪಿಸಬೇಕೆಂದು ಕನ್ನಡ ಒಕ್ಕೂಟ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೆ ಜನ್ಮ ದಿನಾಚರಣೆಯ ಪ್ರಯುಕ್ತ ಗಾಂಧೀಜಿ ನಿಂತಿರುವ ಕಂಚಿನ ಪ್ರತಿಮೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಬೇಕು. ಆ ಇತಿಹಾಸಕ್ಕೆ ಕರ್ನಾಟಕವೇ ಸಾಕ್ಷಿಯಾಬೇಕು ಎಂದು ಆಗ್ರಹಿಸಿದರು.
ಪ್ರತಿಮೆ ನಿರ್ಮಾಣಕ್ಕೆ ಪ್ರಪಂಚದ ಅದ್ಭುತ ಶಿಲ್ಪಿಗಳ ತಂಡವನ್ನೇ ಆಯ್ಕೆ ಮಾಡಬೇಕು. ಅದನ್ನು ಸಮುದ್ರದ ಪಕ್ಕದಲ್ಲೇ ನಿರ್ಮಾಣ ಮಾಡಬೇಕು. ಇದರಿಂದ, ಕೋಟ್ಯಂತರ ಪ್ರವಾಸಿಗರು ದೇಶಕ್ಕೆ ಬರುತ್ತಾರೆ. ಹಾಗೂ ಇದು ದೊಡ್ಡ ಪ್ರವಾಸಿ ಕೇಂದ್ರವಾಗುತ್ತದೆ ಎಂದು ತಿಳಿಸಿದರು.
1ಸಾವಿರ ಎಕರೆ ಪ್ರದೇಶದಲ್ಲಿ ಪ್ರತಿಮೆ ನಿರ್ಮಾಣ ಮಾಡುವುದಲ್ಲದೆ, ಅದೇ ಸ್ಥಳದಲ್ಲಿ, ವಿಶ್ವದಲ್ಲೇ ಅತಿ ಅದ್ಭುತವಾದ ಮ್ಯೂಸಿಯಂ ಸ್ಥಾಪಿಸಬೇಕು. ಅಲ್ಲದೆ, ಪ್ರತಿಮೆ ರಾಜ್ಯದಲ್ಲೇ ಸ್ಥಾಪನೆಯಾದರೆ ಒಂದು ಅದ್ಭುತ. ಇಡೀ ಸಮಗ್ರ ಆರು ಕೋಟಿ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿರುತ್ತದೆ ಎಂದು ಹೇಳಿದರು.