ವಿದ್ಯುತ್ ತಂತಿ ತಗುಲಿ ಬೆಸ್ಕಾಂ ನೌಕರ ಮೃತ್ಯು
Update: 2018-10-17 15:14 GMT
ಬೆಂಗಳೂರು, ಅ.17: ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ತಗುಲಿ ಬೆಸ್ಕಾಂ ನೌಕರನೊಬ್ಬ ಮೃತಪಟ್ಟಿರುವ ದುರ್ಘಟನೆ ಮಲ್ಲೇಶ್ವರದ ಸಂಪಿಗೆ ರಸ್ತೆ ಬಳಿ ನಡೆದಿದೆ.
ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿದ್ದ ಪ್ರದೀಪ್(27) ಮೃತಪಟ್ಟ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರದ ಸಂಪಿಗೆ ರಸ್ತೆ ಖಾಸಗಿ ಹೊಟೇಲ್ ಹತ್ತಿರದ ಖಜಾನ ಸಮೀಪ ಬೆಳಗ್ಗೆ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ರಸ್ತೆ ತಡೆದು, ಪ್ರತಿಭಟನೆ: ಪ್ರದೀಪ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಹಿರಿಯ ಅಧಿಕಾರಿಗಳ ವಿರುದ್ಧ ನೌಕರರು ಮತ್ತು ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಘಟನೆ ಹಿನ್ನೆಲೆಯಲ್ಲಿ ಕೆಇಬಿ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ದುರಂತಕ್ಕೆ ಕಾರಣರಾದ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.