ಬೆಂಗಳೂರು: ಮೂವರು ಬೈಕ್ ಕಳವು ಆರೋಪಿಗಳ ಬಂಧನ
ಬೆಂಗಳೂರು, ಅ.17: ಮಾದಕ ವಸ್ತು ಗಾಂಜಾ ಸೇದಿದ ಮತ್ತಿನಲ್ಲಿ ಬೈಕ್ಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೂರ್ಯ(22), ಪ್ರಶಾಂತ(22) ಹಾಗೂ ದಶರಥ್ (25) ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 11ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳು ಸೇರಿದಂತೆ 8 ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಬೈಕ್ಗಳನ್ನು ಕದ್ದು, ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣದಿಂದ ಕಾರು ಖರೀದಿಸಿ, ಗಾಂಜಾ ಸೇದಲು ಬಳಕೆ ಮಾಡುತ್ತಿದ್ದರು. ಉಳಿದ ಹಣವನ್ನು ಜೂಜಾಟಕ್ಕೆ ಬಳಕೆ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ಮಾಗಡಿ ರಸ್ತೆ, ಚಾಮರಾಜ ಪೇಟೆ, ರಾಜಾಜಿನಗರ ಠಾಣೆಗಳು ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಹಲವು ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.