ರಾಜಸ್ಥಾನ: ದಲಿತ ಯುವಕನ ಥಳಿಸಿ ಹತ್ಯೆ

Update: 2018-10-21 06:14 GMT

ಜೈಪುರ,ಅ.21: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಗುಂಪೊಂದು 22 ವರ್ಷದ ದಲಿತ ಯುವಕನನ್ನು ಹೊಡೆದು ಸಾಯಿಸಿರುವ ಘಟನೆ ಗುರುವಾರ ನಡೆದಿದೆ. ಅಸಾರಾಮ್ ಮೇಘ್ವಾಲ್ ಹತ್ಯೆಗೀಡಾದ ವ್ಯಕ್ತಿ. ಈತನ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಿನ್ನ ಜಾತಿಯ ಯುವತಿಯ ಜತೆ ಅಸಾರಾಮ್‍ಗೆ ಪ್ರೇಮಸಂಬಂಧ ಇತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಕೊಲೆ ನಡೆದಿರಬೇಕು ಎಂದು ಶಂಕಿಸಲಾಗಿದೆ. ಆದರೆ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕೆ ಯುವಕನಿಗೆ ಹೊಡೆದಾಗ ಆತ ಮೃತಪಟ್ಟಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೇಘ್ವಾಲ್ ಮತ್ತು ಆರೋಪಿಗಳು ಚುರು ಜಿಲ್ಲೆಯ ಸಾತ್ರ ಎಂಬ ಒಂದೇ ಗ್ರಾಮದವರಾಗಿದ್ದಾರೆ. ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಒಬ್ಬ ತಲೆ ಮರೆಸಿಕೊಂಡಿದ್ದಾನೆ.

"ನನ್ನ ಸಹೋದರನಿಗೆ ಅಮಾನುಷವಾಗಿ ಥಳಿಸಿ ರಸ್ತೆ ಬದಿ ಎಸೆದು ಹೋಗಿದ್ದಾರೆ" ಎಂದು ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ, ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಅಸಾರಾಮ್ ಇದ್ದ ಎಂದು ಸಹೋದರ ಹನುಮಾನ್ ಪ್ರಸಾದ್ ಹೇಳಿದ್ದಾರೆ.

ಪಕ್ಕದ ಮನೆಯವರು ಬೆದರಿಕೆ ಹಾಕಿದ್ದಾಗಿಯೂ ಅವರು ಆಪಾದಿಸಿದ್ದಾರೆ. "ಗೇಟಿನ ಪಕ್ಕದಲ್ಲಿ ಮನೆಯವರು ನಿಂತಿದ್ದರು. ಸಹೋದರನ ಬಗ್ಗೆ ಕೇಳಿದಾಗ, ಆತನಿಗೆ ನಾವೇ ಹೊಡೆದದ್ದಾಗಿ ಹೇಳಿದ್ದಲ್ಲದೇ, ನನಗೂ ಥಳಿಸುವ ಬೆದರಿಕೆ ಹಾಕಿದರು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News