ದೇಶದ ಅಭಿವೃದ್ಧಿಗೆ ಆಹಾರದ ಮೂಲ ಆರ್ಥಿಕ ನೀತಿ ಅವಶ್ಯ: ಡಾ.ಬರಗೂರು ರಾಮಚಂದ್ರಪ್ಪ

Update: 2018-10-24 16:46 GMT

ಬೆಂಗಳೂರು, ಅ.24: ದೇಶದ ಅಭಿವೃದ್ಧಿಗೆ ಆಹಾರದ ಮೂಲ ಆರ್ಥಿಕ ನೀತಿಯನ್ನು ತ್ವರಿತವಾಗಿ ರೂಪಿಸುವ ಅಗತ್ಯತೆ ಇದೆ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಆನಂದ ರಾವ್ ವತ್ತದ ಕೆಇಬಿ ಸಭಾಂಗಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆಯೋಜಿಸಿದ್ದ ಖಾಯಮೇತರ ಕೆಲಸಗಳು-ಉದ್ಯೋಗದ ಹಕ್ಕು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಶ್ರಮಕ್ಕೆ ಪ್ರತಿಫಲವಾಗಿರುವ ಅನ್ನ, ಮೂಲಸೌಕರ್ಯ ಹಾಗೂ ಕಲ್ಯಾಣ ಕಾರ್ಯಗಳನ್ನು ರೂಪಿಸುವ ಆರ್ಥಿಕ ನೀತಿ ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹಣದ ಆರ್ಥಿಕ ನೀತಿ ಚಾಲ್ತಿಯಲ್ಲಿದ್ದು, ಹಣವನ್ನು ದುಪ್ಪಟ್ಟು ಮಾಡುವ ಕಾಲಚಕ್ರದಲ್ಲಿ ಸಿಲುಕಿದ್ದೇವೆ ಎಂದು ನುಡಿದರು.

ಖಾಸಗೀಕರಣ ಮತ್ತು ಖಾಸಗಿ ಆಸ್ತಿ ಹಕ್ಕು ಅನ್ನು ಸಂವಿಧಾನದಲ್ಲಿ ಒತ್ತು ನೀಡಬಾರದೆಂದು ಡಾ. ಬಿ.ಆರ್. ಅಂಬೇಡ್ಕರ್, ಜವಹರ್‌ಲಾಲ್ ನೆಹರು ವಿರೋಧಿಸಿದ್ದರು. ಆದರೆ, ಇನ್ನಿತರರು ಮನ್ನಣೆ ನೀಡಿದ ಪರಿಣಾಮ, ನಾವು ಖಾಸಗೀಕರಣದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ದಿಢೀರ್ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕಾರಣ, ದೇಶದಲ್ಲೆಡೆ, ಬರೋಬ್ಬರಿ, 2.30 ಲಕ್ಷ ಸಣ್ಣ ಕೈಗಾರಿಕೆಗಳು ನಾಶವಾಗಿದ್ದು, 70 ಲಕ್ಷ ಉದ್ಯೋಗ ಕಣ್ಮರೆಯಾಯಿತು ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿಯೇ ದೇಶ ವ್ಯಾಪಿ 50 ಲಕ್ಷ ಉದ್ಯೋಗ ಖಾಲಿ ಇದೆ. ಹೀಗಾಗಿ, ಕೇಂದ್ರ-ರಾಜ್ಯ ಸರಕಾರಗಳೆರಡು, ಉದ್ಯೋಗ ನೀತಿ ರಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ವಲಯದ ಅಸಂಘಟಿತ ಕಾರ್ಮಿಕರು ಹೋರಾಟ ನಡೆಸಬೇಕಾದ ಅಗತ್ಯತೆ ಇದೆ ಎಂದರು.

ಇತ್ತೀಚಿನ ಕಾಲಘಟ್ಟದಲ್ಲಿ ಮಾನವ ಶಕ್ತಿ ಕಡಿಮೆಗೊಳಿಸುವ ತಂತ್ರಜ್ಞಾನ ಬಳಕೆಗೆ ನಾವು ಮುಂದಾಗಿದ್ದೇವೆ. ಇದರ ಅರ್ಥ ನಾವು, ತಂತ್ರಜ್ಞಾನ, ಆಧುನಿಕತೆಯ ವಿರೋಧಿ ಅಲ್ಲ. ಇನ್ನು ಖಾಸಗೀಕರಣ ಗಳಿಂದಲೇ ದೇಶ ಪ್ರಗತಿ ಸಾಧಿಸಲಿದೆ ಎನ್ನುವ ವಾದ ತಪ್ಪುಎಂದು ತಿಳಿಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, 2001ರ ಐಎಲ್‌ಓ ವರದಿ ಅನ್ವಯ, ಜಗತ್ತಿನ ಮೂರರ ಒಂದರಷ್ಟು ಭಾಗ, ಶ್ರಮಿಕರು, ಯಾವುದೇ ಉದ್ಯೋಗ ಇಲ್ಲದೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮಗ್ರ ವರದಿ ನೀಡಿತ್ತು. ಆದರೆ, ಸರಕಾರಗಳು ಇದುವರೆಗೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವ ಕರಡು ವರದಿ ಸಿದ್ಧವಾಗಿದೆ. ಆದರೆ, ರಾಜ್ಯ ಸರಕಾರದ ಅಡಿಯಲ್ಲಿರುವ ನೌಕರರಿಗೆ ಪ್ರಯೋಜನ ಆಗಿಲ್ಲ ಎಂದ ಅವರು, ವಿಶ್ವವಿದ್ಯಾಲಯ, ಬೆಸ್ಕಾಂ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿರುವುದು ಬೇಸರ ತಂದಿದೆ ಎಂದು ನುಡಿದರು.

ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ) ಪರಿಣಾಮ, ದೇಶದ ರಕ್ಷಣಾ ಇಲಾಖೆ ಸೇರಿದಂತೆ ಬಹಳಷ್ಟು ವಲಯಗಳನ್ನು ವಿದೇಶಿಗರು, ನೇರವಾಗಿ ಗುತ್ತಿಗೆ ಪಡೆದಿದ್ದಾರೆ ಎಂದು ಬರಗೂರು ಆತಂಕ ವ್ಯಕ್ತಪಡಿಸಿದರು.

ವಿಚಾರ ಸಂಕಿರಣದಲ್ಲಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎನ್.ಮೀನಾಕ್ಷಿ ಸುಂದರಮ್, ಪ್ರೊ.ಟಿ.ಆರ್.ಚಂದ್ರಶೇಖರ್, ಹುಬ್ಬಳ್ಳಿ ಕಾನೂನು ವಿವಿಯ ಪ್ರಾಧ್ಯಾಪಕ ಡಾ.ಶರತ್ ಬಾಬು, ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಉಪಸ್ಥಿತರಿದ್ದರು.

‘ಖಾಸಗೀಕರಣ ಮತ್ತು ಖಾಸಗಿ ಆಸ್ತಿ ಹಕ್ಕು ಅನ್ನು ಸಂವಿಧಾನದಲ್ಲಿ ಒತ್ತು ನೀಡಬಾರದೆಂದು ಡಾ. ಬಿ.ಆರ್. ಅಂಬೇಡ್ಕರ್, ಜವಹರ್‌ಲಾಲ್ ನೆಹರು ವಿರೋಧಿಸಿದ್ದರು. ಆದರೆ, ಇನ್ನಿತರರು ಮನ್ನಣೆ ನೀಡಿದ ಪರಿಣಾಮ, ನಾವು ಖಾಸಗೀಕರಣದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದೇವೆ.’

-ಡಾ.ಬರಗೂರು ರಾಮಚಂದ್ರಪ್ಪ, ಬಂಡಾಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News