ಶನಿವಾರದೊಳಗೆ ‘ಬೆಂಗಳೂರು ಗುಂಡಿ ಮುಕ್ತ’ ಎಂದು ಘೋಷಣೆ: ಡಿಸಿಎಂ ಪರಮೇಶ್ವರ್
ಬೆಂಗಳೂರು, ಅ. 25: ಶನಿವಾರದೊಳಗೆ ಬೆಂಗಳೂರು ನಗರವನ್ನು ಗುಂಡಿ ಮುಕ್ತ ಎಂದು ಘೋಷಣೆ ಮಾಡುವಂತೆ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ವೈಟ್ಟಾಪಿಂಗ್, ರಸ್ತೆಗುಂಡಿ, ಕಸ ನಿರ್ವಹಣೆ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಆಡಳಿತದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಲೋಪ-ದೋಷವನ್ನು ಎತ್ತಿಹಿಡಿದು, ಕಟುವಾಗಿ ಸೂಚನೆ ನೀಡಿದ್ದಾರೆ.
ಇಂತಿಷ್ಟು ದಿನದಲ್ಲಿ ರಸ್ತೆ ಗುಂಡಿ ಮುಚ್ಚಲು ಗಡುವು ನೀಡಿದ್ದು, ಈ ಸಂಬಂಧ ಶನಿವಾರ ವಿಚಾರಣೆ ಬರಲಿದೆ. ಅಷ್ಟರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ನಗರದ ಎಂಟು ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದು, ಇದರ ದಾಖಲೆಗಳನ್ನು ಬಿಬಿಎಂಪಿ ವೆಬ್ಸೈಟ್ನಲ್ಲಿಯು ಪ್ರಕಟಿಸುವಂತೆ ಸೂಚಿಸಿದ್ದೇನೆ ಎಂದರು.
ನಗರದ ಪ್ರತಿ ಬೀದಿಯ ರಸ್ತೆ ಗುಂಡಿ ಮುಚ್ಚಿರುವ ಮಾಹಿತಿ ಹಾಕಲಾಗುತ್ತದೆ. ಇದೇ ದಾಖಲೆಯನ್ನು ಹೈಕೋರ್ಟ್ಗೂ ಸಲ್ಲಿಸಲಾಗುವುದು. ಈ ದಾಖಲೆ ತಪ್ಪಿದ್ದರೆ ಆಯಾ ವಲಯ ಜಂಟಿ ಆಯುಕ್ತರಿಗೆ ನೇರ ಕರೆ ಮಾಡಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ಪರಮೇಶ್ವರ್ ತಿಳಿಸಿದರು.
ವೈಟ್ ಟಾಪಿಂಗ್: ಎರಡು ವರ್ಷಗಳಿಂದ ಟೆಂಡರ್ ಶ್ಯೂರ್ ಹಾಗೂ ವೈಟ್ ಟಾಪಿಂಗ್ ಯೋಜನೆ ಪ್ರಗತಿಯಲ್ಲಿದ್ದು, ಈ ಎರಡು ಯೋಜನೆಗಳು ಬೇಸಿಗೆ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
100 ಕಿ.ಮೀ. ವ್ಯಾಪ್ತಿಯ ಈ ಯೋಜನೆ 945 ಕೋಟಿ ರೂ.ಅಂದಾಜಿನಲ್ಲಿ ಕೆಲಸ ಪ್ರಗತಿಯಲ್ಲಿದೆ. ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 11 ತಿಂಗಳ ಅವಧಿ ಇದ್ದರೂ ಪೂರ್ಣಗೊಳಿಸಲು ಆಗಿಲ್ಲ. ವೈಟ್ಟಾಪಿಂಗ್ ಯೋಜನೆಗೆ ಪೊಲೀಸರು ಅವಕಾಶ ನೀಡುವ ಸಂಬಂಧ ಅವರೊಂದಿಗೆ ಸಭೆ ನಡೆಸಲಾಗುವುದು. ಪ್ರಸ್ತುತ ಪ್ರಾರಂಭಿಸಿರುವ ಈ ಯೋಜನೆ ಬೇಸಿಗೆ ಒಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದ ಅವರು, ಪ್ರಸ್ತುತ 665 ಕೋಟಿ ರು.ವೆಚ್ಚದಲ್ಲಿ 63 ಕಿ.ಮೀ.ರಸ್ತೆಯ ಎಂಟು ಪ್ಯಾಕೇಜ್ನ ಟೆಂಡರ್ ಕರೆಯಲಾಗಿದೆ. ಈ ಹಂತದಲ್ಲಿ ಒಟ್ಟು 41ರಸ್ತೆಗಳನ್ನು ವೈಟ್ಟಾಪಿಂಗ್ ಮಾಡಲಾಗುತ್ತದೆ. ಈ ಯಾವುದೇ ಕಾಮಗಾರಿಗೂ ಹಣದ ಕೊರತೆ ಇಲ್ಲ ಎಂದರು.
ತ್ಯಾಜ್ಯ ನಿರ್ವಹಣೆ ಸಂಬಂಧ ಎರಡು ವರ್ಷದಿಂದ ಟೆಂಡರ್ ಕರೆದಿರಲಿಲ್ಲ. ಇನ್ನೊಂದು ತಿಂಗಳೊಳಗಾಗಿ ಹೊಸದಾಗಿ ಟೆಂಡರ್ ಆಹ್ವಾನಿಸಿ, ಕಸ ನಿರ್ವಹಣೆಯ ಮಷಿನರಿಗಳನ್ನು ಗುತ್ತಿಗೆದಾರರು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಯೋಜನೆ ಘಟಕಗಳನ್ನು ಪ್ರತಿ ವಲಯದಲ್ಲೂ 10 ತಿಂಗಳೊಳಗಾಗಿ ತೆರೆಯಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಪ್ರತಿ ಬೀದಿಯಲ್ಲಿ ಎಲ್ಇಡಿ ಬಲ್ಬ್ ಅಳವಡಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು. 800ಕೋಟಿ ರೂ.ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಇದರಿಂದ ಶೇ.80ರಷ್ಟು ವಿದ್ಯುತ್ ಉಳಿತಾಯ ಆಗಲಿದೆ. ಇದರ ನಿರ್ವಹಣೆಗೆ ಪ್ರತ್ಯೇಕ ಕಂಟ್ರೋಲ್ ರೂಂ ಇರಲಿದ್ದು, ಪ್ರತಿ ಬೀದಿಯನ್ನು ನಿರ್ವಹಣೆ ಮಾಡುತ್ತಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು. ಗಾಂಧಿನಗರ ಹಾಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿನ ಮಲ್ಟಿಪಾರ್ಕಿಂಗ್ ಕಾಮಗಾರಿ ಶೀಘ್ರವೇ ಮುಗಿಸಲು ಸೂಚನೆ ನೀಡಿದ್ದೇನೆ. ಜೆ.ಸಿ.ರಸ್ತೆಯಲ್ಲಿನ ಪಾರ್ಕಿಂಗ್ ಎರಡು ಮಹಡಿ ಹೆಚ್ಚಿಸಲು ಡಿಪಿಆರ್ ಮಾಡಲಾಗಿದೆ ಎಂದ ಅವರು, ಬಿಬಿಎಂಪಿ ವಿಭಜನೆ ಮಾಡುವ ತೀರ್ಮಾನ ಸಂಪೂರ್ಣವಾಗಿಲ್ಲ. ಹೆಚ್ಚಿನ ಹೊರೆ ಆಯುಕ್ತರೊಬ್ಬರ ಮೇಲೆ ಬೀಳುತ್ತಿದೆ. ಬಿ.ಎಸ್.ಪಾಟೀಲ್ ವರದಿ ಪ್ರಕಾರ ಆಡಳಿತ ವಿಭಜನೆ ಮಾಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಹೀಗಾಗಿ ಬೆಂಗಳೂರು ಆ್ಯಕ್ಟ್ ತರುವುದು ಚರ್ಚೆಯಲ್ಲಿದೆ ಎಂದರು.
ಸಭೆಯಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಎಂಟು ವಲಯಗಳ ಬಿಬಿಎಂಪಿ ಜಂಟಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಬಿಬಿಎಂಪಿ ಪೌರ ಕಾರ್ಮಿಕ ಮಹಿಳೆಯರಿಗೆ ‘ಮೀ ಟೂ’ ಆರೋಪ ಮಾಡುವವರು ನೇರ ದೂರ ನೀಡಿದರೆ, ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು. ವೈಯರ್ ಲೆಸ್ ವಿಭಾಗದ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗುವುದು’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ