ಪರಿಷತ್ ನೂತನ ಸದಸ್ಯರಾಗಿ ನಸೀರ್ ಅಹ್ಮದ್, ಪ್ರಕಾಶ್ ರಾಠೋಡ್, ಯು.ಬಿ.ವೆಂಕಟೇಶ್ ಪ್ರಮಾಣ ವಚನ ಸ್ವೀಕಾರ
Update: 2018-11-05 12:50 GMT
ಬೆಂಗಳೂರು, ನ. 5: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ನಸೀರ್ ಅಹ್ಮದ್ ಹಾಗೂ ನಾಮ ನಿರ್ದೇಶನಗೊಂಡ ಪರಿಷತ್ತಿನ ನೂತನ ಸದಸ್ಯರಾದ ಪ್ರಕಾಶ್ ರಾಠೋಡ್, ಯು.ಬಿ.ವೆಂಕಟೇಶ್ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸೋಮವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ‘ಅಲ್ಲಾಹ್’ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮೂರು ಮಂದಿ ನೂತನ ಸದಸ್ಯರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸಿದರು. ಆ ಬಳಿಕ ಮೂವರು ಸದಸ್ಯರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಈ ವೇಳೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಝಮೀರ್ ಅಹ್ಮದ್ ಖಾನ್, ರಾಜಶೇಖರ್ ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಅಲ್ಲಂ ವೀರಭದ್ರಪ್ಪ, ಕೆ.ಎಚ್. ಮುನಿಯಪ್ಪ, ರಿಜ್ವಾನ್ ಅರ್ಶದ್ ಸೇರಿದಂತೆ ಇನ್ನಿತರರು ಹಾಜರಿದ್ದರು.