ತೆಲುಗುದೇಶಂ ಜತೆ ಮೈತ್ರಿಗೆ ವಿರೋಧ: ಚಿರಂಜೀವಿ ಕಾಂಗ್ರೆಸ್ಗೆ ಗುಡ್ಬೈ ?
ಹೈದರಾಬಾದ್, ನ. 11: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗುದೇಶಂ ಜತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಚಿತ್ರನಟ- ರಾಜಕಾರಣಿ ಕೆ.ಚಿರಂಜೀವಿ, ಪಕ್ಷ ತೊರೆಯಲು ಮುಂದಾಗಿದ್ದಾರೆ.
ಈ ಮೈತ್ರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಿರಂಜೀವಿ, ತೆಗುಲುದೇಶಂ ಜತೆಗಿನ ಮೈತ್ರಿಯನ್ನು ಅನೈತಿಕ ಎಂದು ಬಣ್ಣಿಸಿದ್ದಾಗಿ ಅವರ ಕುಟುಂಬದ ಆಪ್ತ ಮೂಲಗಳು ಹೇಳಿವೆ.
ನವೆಂಬರ್ 1ರಂದು ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, 2019ರ ಲೋಕಸಭಾ ಚುನಾವಣೆ ಮತ್ತು ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಜತೆಯಾಗಿ ಕಾರ್ಯ ನಿರ್ವಹಿಸಲಿವೆ ಎಂದು ಪ್ರಕಟಿಸಿದ್ದರು.
"ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬಗ್ಗೆ ಚಿರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಬೇಕಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಮೂಲಗಳು ಹೇಳಿವೆ.