ಮಸೀದಿಯ ಹೆಸರುಗಳನ್ನು ಬದಲಿಸಿ ವಿಷ್ಣುವಿನ ಹೆಸರಿಡಲಾಗುವುದು

Update: 2018-11-11 16:26 GMT

ಹೊಸದಿಲ್ಲಿ, ನ.11: ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, “ಮಸೀದಿಯ ಹೆಸರುಗಳನ್ನು ಬದಲಿಸಿ ವಿಷ್ಣುವಿನ ಹೆಸರನ್ನು ಇಡಲಾಗುವುದು” ಎಂದಿರುವ ವಿಡಿಯೋವೊಂದು ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ.

ಉತ್ತರ ಪ್ರದೇಶದ ಹಲವು ಸ್ಥಳಗಳ ಹೆಸರು ಬದಲಾವಣೆಗೆ ಸಂಬಂಧಿಸಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಸಂಬಿತ್ ಪಾತ್ರ, ಎಐಎಂಐಎಂ ವಕ್ತಾರ ಸೈಯದ್ ಆಸಿಂ ವಕಾರ್ ಭಾಗವಹಿಸಿದ್ದರು. ಶತಮಾನಗಳಿಂದ ಹಿಂದೂಗಳು ಮುಸ್ಲಿಮರಿಂದ ತುಳಿತಕ್ಕೊಳಗಾಗುತ್ತಿದ್ದಾರೆ. ಆಕ್ರಮಣಕಾರರು ಭಾರತದ ಊರುಗಳ ಹೆಸರನ್ನು ಬದಲಾಯಿಸಿದ್ದಾರೆ ಎಂದು ಪಾತ್ರ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಕಾರ್, “ಏಕನಾ ಅಂತಾರಾಷ್ಟ್ರೀಯ ಸ್ಟೇಡಿಯಂನ ಹೆಸರನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಸ್ಟೇಡಿಯಂ ಎಂದು ಬಿಜೆಪಿ ಹೆಸರು ಬದಲಿಸಿದ್ದೇಕೆ?” ಎಂದು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಸಂಬಿತ್ ಪಾತ್ರ, “ನೀವು ಬಾಯಿಮುಚ್ಚಿ, ಇಲ್ಲದಿದ್ದರೆ ಮಸೀದಿಗಳಿಗೆ ವಿಷ್ಣುವಿನ ಹೆಸರಿಡುತ್ತೇನೆ” ಎಂದರು.

ಸಂಬಿತ್ ಪಾತ್ರರ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News