ತಮಿಳುನಾಡಿನಲ್ಲಿ ಗಜ ಚಂಡಮಾರುತಕ್ಕೆ 12 ಬಲಿ
Update: 2018-11-16 05:53 GMT
ಚೆನ್ನೈ, ನ.16: ತಮಿಳುನಾಡಿನಲ್ಲಿ ಗಜ ಚಂಡಮಾರುತ ಭಾರೀ ಹಾನಿಯನ್ನುಂಟು ಮಾಡಿದ್ದು 12 ಮಂದಿ ಬಲಿಯಾಗಿದ್ದಾರೆ.
ಗಜ ಚಂಡ ಮಾರುತ ತಮಿಳುನಾಡು ಮತ್ತು ಪುದುಚೇರಿ ಕರಾವಳಿ ತೀರ ದಾಟಿದೆ. ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ವರದಿ ತಿಳಿಸಿದೆ.
ಮಳೆ, ಬಿರುಗಾಳಿ ಭಾರೀ ಅನಾಹುತವನ್ನುಂಟು ಮಾಡಿದೆ. ಕಟ್ಟಡಗಳು , ವಿದ್ಯುತ್ ಕಂಬಗಳು , ಮರಗಿಡಗಳು ನೆಲಕ್ಕುರುಳಿವೆ.ನಾಗಪಟ್ಟಣ ಮತ್ತು ತಿರುವಾರೂರು ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ 6 ಜಿಲ್ಲೆಗಳ ತಗ್ಗು ಪ್ರದೇಶಗಳಿಂದ ಸುಮಾರು 81 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.