ಕಾವೇರಿ- ಆನ್ ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಚಾಲನೆ

Update: 2018-11-16 09:47 GMT

ಬೆಂಗಳೂರು, ನ.16: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿಪಡಿಸಿರುವ ಕಾವೇರಿ-ಆನ್ಲೈನ್ ಸೇವೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಸೇವೆಗಳನ್ನು ಪರಿಚಯಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ರೈತರ ಸಾಲಮನ್ನಾ ಯೋಜನೆಯ ಮಾಹಿತಿಯನ್ನೂ ಕೂಡ ಆನ್ ಲೈನ್ ನಲ್ಲೇ ಕ್ರೋಢೀಕರಿಸಲಾಗುತ್ತಿದೆ. ಇದರಿಂದಾಗಿ ಈ ಯೋಜನೆಯ ಫಲ ನೇರವಾಗಿ ಅರ್ಹರಿಗೇ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕಂದಾಯ ಇಲಾಖೆ ಜನರಿಗೆ ಅತ್ಯಂತ ಸಮೀಪವಾದ ಇಲಾಖೆ. ನಾಗರಿಕ ಕೇಂದ್ರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಆಡಳಿತದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕರಾದ ರೋಷನ್ ಬೇಗ್, ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ, ಭೋಜೇಗೌಡ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ನಿರೀಕ್ಷಕ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತಿತರರು ಹಾಜರಿದ್ದರು.


ಕಾವೇರಿ - ಆನ್ಲೈನ್ ಸೇವೆಗಳು:

ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸ್ಥಿರಾಸ್ತಿಗಳ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರಗಳನ್ನು ನೋಂದಣಿ ಮಾಡುವ ಜವಾಬ್ದಾರಿ ಹೊಂದಿರುತ್ತದೆ. ನೋಂದಾಯಿಸಿದ ದಾಖಲೆಗಳ ಭದ್ರತೆಯನ್ನು  ಕಾಪಾಡಿಕೊಂಡು ಅವುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಸಂರಕ್ಷಿಸುವುದು ಇಲಾಖೆಯ ಆದ್ಯ ಕರ್ತವ್ಯವಾಗಿರುತ್ತದೆ.

ಸಾರ್ವಜನಿಕರಿಗೆ ನೋಂದಣಿಗೆ ಸಂಬಂಧಿಸಿದಂತಹ ಈ ಸೇವೆಗಳನ್ನು ಸುಲಭವಾಗಿ ತಲುಪಿಸಲು ಒಂದೇ ಹಂತದ ಪರಿಹಾರ ಕ್ರಮವಾಗಿ ಇಲಾಖೆಯು KAVERI Online ಸೇವೆಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳು ಈ ಕೆಳಕಂಡಂತೆ ಇರುತ್ತದೆ.

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ/ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ :

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಆನ್ಲೈನ್ ಮುಖಾಂತರ  ಪಡೆಯಬಹುದು. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಆನ್ಲೈನ್ ಮೂಲಕ ಸೂಕ್ತ ಶುಲ್ಕವನ್ನು ಪಾವತಿಸುವ ಮೂಲಕ ಪಡೆಯಬಹುದಾಗಿರುತ್ತದೆ.

ನೋಂದಾಯಿಸಿದ ದಸ್ತಾವೇಜಿನ ದೃಢೀಕೃತ ನಕಲನ್ನು ಪಡೆಯಲು ಸಾರ್ವಜನಿಕರು ಆನ್ಲೈನ್ ನಲ್ಲಿ ದಸ್ತಾವೇಜು ನೋಂದಾಯಿಸಿದ ಉಪನೋಂದಣಿ ಕಚೇರಿಯ ಹೆಸರನ್ನು ಆಯ್ಕೆ ಮಾಡಿ ದಸ್ತಾವೇಜಿನ ಸಂಖ್ಯೆ ನಮೂದಿಸಿ ಸೂಕ್ತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಪಡೆಯಬಹುದಾಗಿರುತ್ತದೆ.

ಸ್ಥಿರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವಿಕೆ:

ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಮಾಡಬಹುದಾಗಿರುತ್ತದೆ.

ಸಾರ್ವಜನಿಕರಿಂದ ನೋಂದಣಿ ಪೂರ್ವ ಡೇಟಾ ಎಂಟ್ರಿ:

ಈ ಸೇವೆಯು ಸಾರ್ವಜನಿಕರಿಂದ ಉಪನೋಂದಣಿ ಕಚೇರಿಗೆ ಅನೇಕ ಬಾರಿ ಭೇಟಿ ನೀಡುವುದನ್ನು ತಪ್ಪಿಸಿ ಆನ್ಲೈನ್ ಮೂಲಕ ದಸ್ತಾವೇಜನ್ನು ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲಾ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್ಲೈನ್ ಮೂಲಕ ನಮೂದಿಸಿಕೊಂಡು, ಮಾಹಿತಿಗಳನ್ನು ವೀಕ್ಷಿಸಿದ ನಂತರ ಅವಶ್ಯವಿದ್ದಲ್ಲಿ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ  ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರಾತಿಗಾಗಿ ಅರ್ಜಿಯನ್ನು ಉಪನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು.

ದಸ್ತಾವೇಜಿನ ನೋಂದಣಿಗೆ ಮುಂಗಡ ಕಾಲ ನಿಗದಿಪಡಿಸುವಿಕೆ ( Appointment Booking) :

ಉಪನೋಂದಣಾಧಿಕಾರಿಗಳು ಸಾರ್ವಜನಿಕರಿಂದ ಆನ್ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯವನ್ನು ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಸಾರ್ವಜನಿಕರು ಪಾವತಿಸಲು ಸಿದ್ಧರಿದ್ದಲ್ಲಿ ಆನ್ಲೈನ್ ಮೂಲಕ ಪಾವತಿಸಿ, ಅವಕಾಶವಿದ್ದ ಮುಂದಿನ ದಿನಾಂಕಗಳಂದು ನೋಂದಣಿ ಪ್ರಕ್ರಿಯೆಗಾಗಿ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳಬಹುದಾಗಿರುತ್ತದೆ.

 ಉಪನೋಂದಣಿ ಕಚೇರಿಯ ಗುರುತಿಸುವಿಕೆ :

ರಾಜ್ಯದ ಎಲ್ಲಾ 250 ಉಪನೋಂದಣಿ ಕಚೇರಿಗಳ ವಿಳಾಸದ ಮಾಹಿತಿಯು ಆನ್ಲೈನ್ ಪೋರ್ಟಲ್ ನಲ್ಲಿ ಲಭ್ಯವಿದ್ದು, ಸಂಬಂಧಿಸಿದ ಕಾರ್ಯ ವ್ಯಾಪ್ತಿಯ ಉಪನೋಂದಣಿ ಕಚೇರಿಯಲ್ಲಿ ವಿವರವನ್ನು ಸಾರ್ವಜನಿಕರು ತಂತ್ರಾಂಶದಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ.

ವಿವಾಹ ನೋಂದಣಿ ಕಚೇರಿಯ ಗುರುತಿಸುವಿಕೆ :

ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿದ ಸ್ಥಳ ಆಧಾರಿಸಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಾದ ಕಚೇರಿ ವಿವರಗಳನ್ನು ದೃಢಪಡಿಸಿಕೊಳ್ಳಬಹುದು. ವಿವಾಹ ನೋಂದಣಿ ಮಾಡಿಕೊಳ್ಳಲು ಆಯಾ ಕಾರ್ಯ ವ್ಯಾಪ್ತಿಯ ಕಛೇರಿಗಳ ವಿವರವನ್ನು ಆನ್ಲೈನ್ ಪೋರ್ಟಲ್ ನಿಂದ ಪಡೆಯಬಹುದಾಗಿರುತ್ತದೆ.

KACOMP ಕಾಯ್ದೆ ಅಡಿಯಲ್ಲಿ ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಫೈಲಿಂಗ್ ಮಾಡುವಿಕೆ:

ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭದಲ್ಲಿ KACOMP ಕಾಯ್ದೆ ಅಡಿಯಲ್ಲಿ ಪಡೆಯುವ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳನ್ನು ಆನ್ಲೈನ್ ಮೂಲಕ ಫೈಲಿಂಗ್ ಮಾಡುವ ಸೌಲಭ್ಯವನ್ನು ಬ್ಯಾಂಕುಗಳ ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಒದಗಿಸಲಾಗಿದೆ.

ಮೌಲ್ಯ ಮೊಬೈಲ್ ಆಪ್:

ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ, ಮೌಲ್ಯ ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಆನ್ಲೈನ್ ಇ-ಸ್ಟಾಂಪ್ ಮುದ್ರಾಂಕ ಕಾಗದ

ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಇ-ಸ್ಟಾಂಪ್ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟ್ ಔಟ್ ತೆಗೆದುಕೊಳ್ಳುವ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿ. (SHCIL) ರವರ ಸಹಯೋಗದೊಂದಿಗೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News