ಕೊಡಗು ನಿರಾಶ್ರಿತರ ಪುನರ್ವಸತಿಗೆ ಶಾಲಾ ಶಿಕ್ಷಕ ಸಂಘದಿಂದ 24 ಕೋಟಿ ರೂ.ಪರಿಹಾರ
Update: 2018-11-16 13:37 GMT
ಬೆಂಗಳೂರು, ನ.16: ಧಾರಾಕಾರ ಮಳೆಯಿಂದಾಗಿ ಸಮಸ್ಯೆಗಳಿಗೆ ಈಡಾಗಿರುವ ಕೊಡಗಿನ ನಿರಾಶ್ರಿತರ ಪುನರ್ವಸತಿಗಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 24 ಕೋಟಿ ರೂ.ನೀಡಿದೆ.
ನಗರದ ಆರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ 24 ಕೋಟಿ ರೂ.ಮೊತ್ತದ ಚೆಕ್ನ್ನು ನೀಡಿ, ಕೊಡಗಿನ ನಿರಾಶ್ರಿತರ ಬದುಕು ಹಸನಾಗಲಿ ಎಂದು ಹಾರೈಸಿದರು.
ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದ ಸರಕಾರಿ ಶಾಲಾ ಶಿಕ್ಷಕರು ತಮ್ಮದೆ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯು ತಮ್ಮ ಒಂದು ದಿನದ ವೇತವನ್ನು ಕೊಡಗಿನ ನಿರಾಶ್ರಿತರ ಪುನರ್ ವಸತಿಗೆ ನೀಡಿರುವುದು ಅಭಿನಂದನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.