ಕಾರ್ಪೊರೇಟರ್ ಪತಿ ಇಷ್ತಿಯಾಕ್ ಅಹ್ಮದ್ ಪೊಲೀಸ್ ವಶಕ್ಕೆ: ಡೀಲ್ ಸ್ಥಳದ ಮಹಜರ್
ಬೆಂಗಳೂರು, ನ.16: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು, ಆರೋಪಿಗಳು ವ್ಯವಹಾರ ನಡೆದಿದ್ದ ಸ್ಥಳವನ್ನು ಶನಿವಾರ ಮಹಜರ್ ಮಾಡಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನೆ ಕೆಲಸಗಾರ ಜಯರಾಂ ಎಂಬಾತನನ್ನು ಕರೆದೊಯ್ದ ಅಧಿಕಾರಿಗಳು ಚಾಲುಕ್ಯ ವೃತ್ತದ ಬಳಿ ಇರುವ ಓಣಿ ಮುನೇಶ್ವರ ದೇವಾಲಯದ ಬಳಿ ಸ್ಥಳ ಮಹಜರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಪೋರೇಟರ್ ಪತಿ: ಇದೇ ಪ್ರಕರಣ ಸಂಬಂಧ ಶಿವಾಜಿನಗರ ವಾರ್ಡ್ನ ಕಾರ್ಪೋರೇಟರ್ ಪತಿ ಹಾಗೂ ರೌಡಿಶೀಟರ್ ಇಷ್ತಿಯಾಕ್ ಅಹ್ಮದ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನ.12ರ ರಾತ್ರಿ ಶಿವಾಜಿನಗರ ಕಾರ್ಪೋರೇಟರ್ ಫರೀದಾ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೆ, ಗುರುವಾರ ರಾತ್ರಿಯೂ ಸಹ ಆ್ಯಂಬಿಡೆಂಟ್ ವಂಚನೆ ಪ್ರಕರಣ ಸಂಬಂಧ ದಾಳಿ ನಡೆಸಿದ್ದರು ಎನ್ನಲಾಗಿದೆ.
ಈ ಸಂಬಂಧ ರೌಡಿಶೀಟರ್ ಇಷ್ತಿಯಾಕ್ ಅಹ್ಮದ್ ಅನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.