ಬೆಂಗಳೂರು: ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಢಿಕ್ಕಿ; ರೋಗಿ ಸೇರಿ ನಾಲ್ವರು ಮೃತ್ಯು

Update: 2018-11-18 12:33 GMT

ಬೆಂಗಳೂರು, ನ.18: ನಿಂತಿದ್ದ ಲಾರಿಗೆ ಆಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ರೋಗಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ತಮಿಳುನಾಡು ರಸ್ತೆಯ ಹೊಸೂರು ಬಳಿ ನಡೆದಿದೆ.

ರವಿವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಆ್ಯಂಬುಲೆನ್ಸ್ ಚಾಲಕ ಜೈಸೂರ್ಯ, ಸಹಾಯಕ ಮದನ್ ಕುಮಾರ್ ಹಾಗೂ ಇಬ್ಬರು ರೋಗಿಗಳು ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಚಿಕಿತ್ಸೆಗಾಗಿ ತಮಿಳುನಾಡಿನ ತಿರುಚಿಯಿಂದ ಬೆಂಗಳೂರು ಆಸ್ಪತ್ರೆಯೊಂದಕ್ಕೆ ಇಬ್ಬರು ರೋಗಿಗಳನ್ನು ಕರೆ ತರಲಾಗುತ್ತಿತ್ತು. ಈ ವೇಳೆ ಹೊಸೂರು-ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯ ಸೀತರಾಮನಗರ ಬಳಿ ರವಿವಾರ ಬೆಳಗ್ಗೆ 3:30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ನೇರವಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಆ್ಯಂಬುಲೆನ್ಸ್ ಸಂಪೂರ್ಣ ಜಖಂಗೊಂಡಿದ್ದು, ಕ್ರೇನ್ ಮೂಲಕ ಆ್ಯಂಬುಲೆನ್ಸ್ ಅನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಅತಿಯಾದ ಮಂಜು ಕವಿದಿತ್ತು. ಚಾಲಕನಿಗೆ ಮುಂದೆ ನಿಂತಿದ್ದ ಲಾರಿ ಕಾಣದೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹೊಸೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News