ಪೇಜಾವರ ಶ್ರೀ ಬೆಂಗಾವಲು ವಾಹನಕ್ಕೆ ಕಾರು ಢಿಕ್ಕಿ: ದಂಪತಿ ಮೃತ್ಯು

Update: 2018-11-18 12:39 GMT

ಬೆಂಗಳೂರು, ನ.18: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಬೆಂಗಾವಲು(ಎಸ್ಕಾರ್ಟ್) ನೀಡುತ್ತಿದ್ದ ಪೊಲೀಸ್ ವಾಹನಕ್ಕೆ ಕಾರು ಢಿಕ್ಕಿಯಾದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ಇಲ್ಲಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ಕರಪನಹಳ್ಳಿ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಚಿಂತಾಮಣಿ ಮೂಲದ ದಂಪತಿಗಳಾದ ರಾಮ ಕೃಷ್ಣಯ್ಯ ಮತ್ತು ಸರ್ವಲೋಚನಾ ಎಂಬುವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರವಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊಸಕೋಟೆ ಮುಖಾಂತರ ಚಿಂತಾಮಣಿ ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಕಾರಿನ ಮುಂದೆ ಸಾಗುತ್ತಿದ್ದ ಪೊಲೀಸ್ ಎಸ್ಕಾರ್ಟ್ ವಾಹನಕ್ಕೆ, ಚಿಂತಾಮಣಿ ಕಡೆಯಿಂದ ಎದುರಿನಿಂದ ಅತಿವೇಗವಾಗಿ ಬಂದ ಇಂಡಿಗೋ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಇದರ ಪರಿಣಾಮ ಕಾರಿನಲ್ಲಿದ್ದ ಚಿಂತಾಮಣಿ ಮೂಲದ ದಂಪತಿಗಳಾದ ರಾಮಕೃಷ್ಣಯ್ಯ ಮತ್ತು ಸರ್ವಲೋಚನಾ ಎಂಬುವರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಎಸ್ಕಾರ್ಟ್ ಕಾರಿನಲ್ಲಿದ್ದ ಎಎಸ್ಸೈ ಶಂಭಯ್ಯ ಎಂಬುವರ ಕಾಲಿಗೂ ಗಾಯವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News