ಬಿಜೆಪಿ ಇತಿಹಾಸ ಮರೆಮಾಚುವ ಕೆಲಸ ಮಾಡುತ್ತಿದೆ: ಡಿಸಿಎಂ ಪರಮೇಶ್ವರ್

Update: 2018-11-19 13:26 GMT

ಬೆಂಗಳೂರು, ನ. 19: ಬಿಜೆಪಿ ಈ ಸಮಾಜಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಬದಲಿಗೆ ಕಾಂಗ್ರೆಸ್ ಕೊಟ್ಟ ಯೋಜನೆಯನ್ನು ಮರೆಸುವ, ಇತಿಹಾಸ ಮರೆಮಾಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಟೀಕಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜಕೀಯ ಇತಿಹಾಸದಲ್ಲಿ ಸ್ಮರಿಸಿಕೊಳ್ಳುವ ಕೆಲವರ ಪೈಕಿ ಇಂದಿರಾ ಗಾಂಧಿ ಅವರು ಒಬ್ಬರು ಎಂದರು.

ಅಧಿಕಾರ ನಡೆಸಿದ್ದರೂ ಕೆಲವರು ತಮ್ಮ ಛಾಪು ಮೂಡಿಸಿಲ್ಲ. ಆದರೆ ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರದ ಮೂಲಕ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂದಿನ ಕಾಲದಲ್ಲಿ ಊಟಕ್ಕೂ ಕಷ್ಟವಿತ್ತು. ಆ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರ ಉತ್ಪಾದನೆಗೆ ಶಾಶ್ವತ ಪರಿಹಾರ ನೀಡಿದರು ಎಂದು ಅವರು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡವರೂ ಖಾತೆ ತೆಗೆದು, ಸಾಲ ಪಡೆಯುವ ಶಕ್ತಿಯನ್ನು ನೀಡಿದ್ದು ಇಂದಿರಾ ಗಾಂಧಿ. ಆದರೆ ಬಿಜೆಪಿ ಈ ಸಮಾಜಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಬದಲಿಗೆ ಕಾಂಗ್ರೆಸ್ ಕೊಟ್ಟ ಯೋಜನೆಯನ್ನು ಮರೆಸುವ, ಇತಿಹಾಸ ಮರೆಮಾಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮಗಳು ಮುಂದುವರೆಯಬೇಕು ಎಂಬ ಉದ್ದೇಶದಿಂದಲೇ ಸಮ್ಮಿಶ್ರ ಸರಕಾರ ರಚಿಸಿದ್ದೇವೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರ ಪರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿತ್ತು. ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿ ರೈತರನ್ನು ನಮ್ಮ ವಿರುದ್ಧ ಎತ್ತಿ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕವಾಗಿ ರೈತರ ಪರ ನಿಂತಿದೆ. ಕೇಂದ್ರ ಸರಕಾರ ನಾಲ್ಕೂವರೆ ವರ್ಷದಲ್ಲಿ ರೈತರ ಪರ ಯಾವ ಯೋಜನೆಯನ್ನು ನೀಡಿಲ್ಲ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೂಳೀಪಟವಾಗಲಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ನಿಂದ ಅಷ್ಟೇ ಸಾಧ್ಯ ಎಂದು ಅವರು ನುಡಿದರು.

ಸಮಾರಂಭದಲ್ಲಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇತರೆ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News