ಟೆಲಿಕಾಂ ಟವರ್ ಅಳವಡಿಕೆಗೆ ಲೈಸನ್ಸ್ ಕಡ್ಡಾಯ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-11-19 14:21 GMT

ಬೆಂಗಳೂರು, ನ. 19: ರಾಜ್ಯಾದ್ಯಂತ ಹಾಕಿರುವ ಎಲ್ಲ ಬಗೆಯ ಟವರ್‌ಗಳಿಗೆ ಆಯಾ ಕಂಪೆನಿಗಳು ಮೂರು ತಿಂಗಳೊಳಗಾಗಿ ಲೈಸನ್ಸ್ ಪಡೆಯುವುದು ಕಡ್ಡಾಯ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮೊಬೈಲ್ ಟವರ್ ಅಳವಡಿಕೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಇನ್ಟಲೇಷನ್ ಆಫ್ ನ್ಯೂ ಟೆಲಿಕಮ್ಯುನಿಕೇಷನ್ ಇನ್‌ಫ್ರಾಸ್ಟ್ರಕ್ಚರ್ ಕಾಯ್ದೆಗೆ ಹೊಸದಾಗಿ ನಿಯಮಗಳನ್ನು ಅಳವಡಿಸಲಾಗಿದೆ ಎಂದರು.

ಇದುವರೆಗೂ ಟವರ್ ಅಳವಡಿಕೆಗೆ ಯಾವುದೇ ರೀತಿಯ ನಿಯಮ, ಲೈಸನ್ಸ್ ಪಡೆಯುವ ಪದ್ಧತಿ ಇರಲಿಲ್ಲ. ಯಾವುದೇ ಮಾನದಂಡವಿಲ್ಲದೆ ನೆಟ್‌ವರ್ಕ್ ಕಂಪೆನಿಗಳು ಟವರ್ ಹಾಕಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಹೊಸದಾಗಿ ನಿಯಮ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 30ಸಾವಿರಕ್ಕೂ ಹೆಚ್ಚು ಒಎಫ್‌ಸಿ ಹಾಗೂ ಟೆಲಿಕಮ್ಯುನಿಕೇಷನ್ ಟವರ್ಸ್‌ಗಳಿವೆ. ಬೆಂಗಳೂರು ಒಂದರಲ್ಲೆ 6,766 ಟವರ್‌ಗಳಿವೆ. ಇನ್ನು ಮುಂದೆ ಯಾವುದೇ ಹೊಸದಾಗಿ ಟವರ್ ಹಾಕಬೇಕಿದ್ದರೂ ಮಹಾನಗರಗಳಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳಿಂದ ಕನಿಷ್ಠ 50 ಮೀಟರ್ ಅಂತರದಲ್ಲಿ ಟವರ್ ಅಳವಡಿಕೆ ಮಾಡಬೇಕು. ಲೈಸೆನ್ಸ್ ತೆಗೆದುಕೊಳ್ಳುವುದು ಕಡ್ಡಾಯ ಎಂದರು.

ಟವರ್ ಅಳವಡಿಕೆಗೆ ನಿಯಮ ಇಲ್ಲದ ಕಾರಣ ಈಗಾಗಲೇ ಅಳವಡಿಸಿರುವ ಟವರ್‌ಗಳು ಲೈಸೆನ್ಸ್ ಪಡೆಯುವ ಅನಿವಾರ್ಯತೆ ಇರಲಿಲ್ಲ. ಇದರಿಂದ ಕೆಲ ಟವರ್‌ಗಳನ್ನು ಶಾಲಾ ಕಾಲೇಜುಗಳ ಸಮೀಪವೇ ಹಾಕಲಾಗಿದೆ. ಹೀಗಾಗಿ ಇವರು ಕನಿಷ್ಠ 3ತಿಂಗಳ ಒಳಗಾಗಿ 50ಮೀಟರ್ ಅಂತರದಲ್ಲಿ ಟವರ್ ಹಾಕಿಕೊಂಡು ಲೈಸನ್ಸ್ ಪಡೆದುಕೊಳ್ಳುವುದು ಕಡ್ಡಾಯ. ಶಾಲಾ-ಕಾಲೇಜು ಸಮೀಪವಿದ್ದರೆ ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಹೊಸದಾಗಿ ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ 15 ದಿನದೊಳಗೆ ಅನುಮತಿ ನೀಡುವಂತೆ ಸೂಚಿಸಲಾಗಿದೆ. ಈ ಮೊದಲು 45 ದಿನಗಳ ವರೆಗೂ ಕಾಯಬೇಕಿತ್ತು. ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ಪರಮೇಶ್ವರ್ ಇದೇ ವೇಳೆ ಹೇಳಿದರು. ಟವರ್ ಅಳವಡಿಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಟವರ್ ಅಳವಡಿಸಲು 1ಲಕ್ಷ ರೂ.ಶುಲ್ಕ ಪಾವತಿಸಬೇಕು. ನಗರ, ಮಹಾನಗರಗಳಲ್ಲಿ 35ಸಾವಿರ ರೂ., ನಗರಸಭೆ ವ್ಯಾಪ್ತಿಯಲ್ಲಿ 25ಸಾವಿರ ರೂ.ಹಾಗೂ ಗ್ರಾಮ ಪಂಚಾಯತಿಯಲ್ಲಿ 15 ಸಾವಿರ ರೂ.ಶುಲ್ಕ ಪಾವತಿಸಬೇಕು ಎಂದು ಅವರು ಹೇಳಿದರು.

ಅಲ್ಲದೆ, ನೂತನ ಕಾಯಿದೆಯಲ್ಲಿ ಟವರ್ ಅಳವಡಿಸುವ ಕಟ್ಟಡದ ಭದ್ರತೆ, ನೋಂದಣಿ ರೂಪುರೇಷೆಯನ್ನು ಪರಿಶೀಲಿಸಲು ಬಿಲ್ಡಿಂಗ್ ಪ್ಲಾನ್ ಆಕ್ಯುಪೇಷನ್ ಸರ್ಟಿಫಿಕೇಟ್‌ಅನ್ನು ಸಂಬಂಧಪಟ್ಟ ಇಂಜಿನಿಯರ್ ಅವರಿಂದ ಪಡೆಯಬೇಕು. ಹೆಚ್ಚು ಶಬ್ದ ಬರುವ ಜನರೇಟರ್ ಬದಲು ಶಬ್ದ ರಹಿತ ಜನರೇಟರ್ ಅಳವಡಿಸಬೇಕು. ಮೊಬೈಲ್ ಟವರ್‌ನಿಂದ ಯಾವುದೇ ರೀತಿಯ ತೊಂದರೆ ಉಂಟಾದರೆ ಈ ಬಗ್ಗೆ ದೂರು ದಾಖಲಿಸಲು ಪ್ರತ್ಯೇಕ ಸೆಲ್ ತೆರೆಯಲಾಗುವುದು ಎಂದ ಅವರು, ಪ್ರತಿ ಜಿಲ್ಲೆಯಲ್ಲಿ ಟವರ್ ಅಳವಡಿಕೆ ಸಂಬಂಧ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಆಯಾ ಜಿಲ್ಲೆಯ ಡಿಸಿ, ಜಿ.ಪಂ.ಸಿಇಓ, ಸಿಇಆರ್‌ಎಂ ಸದಸ್ಯ, ಆರೋಗ್ಯ, ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಇನ್ನಿತರರು ಇರಲಿದ್ದಾರೆ ಎಂದರು.

ಟವರ್‌ನಿಂದ ಹೊರಹೊಮ್ಮುವ ರೇಡಿಯೇಷನ್‌ನಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಕೇಳಿ ಬಂದಿವೆ. ವೈಜ್ಞಾನಿಕವಾಗಿ ಯಾವುದು ದೃಢಪಟ್ಟಿಲ್ಲ. ಆದರೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News