ತಮಿಳುನಾಡಿನಲ್ಲಿ ರಸ್ತೆ ಅಪಘಾತ: ಬೆಂಗಳೂರಿನ ನಾಲ್ವರು ಮೃತ್ಯು

Update: 2018-12-02 13:39 GMT

ಮಧುರೆ/ ಬೆಂಗಳೂರು, ಡಿ.2: ರಸ್ತೆಬದಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಧುರೆ ಸಮೀಪದ ದಿಂಡಿಗಲ್ ಬಳಿ ರವಿವಾರ ಸಂಭವಿಸಿದೆ.

ಬೆಂಗಳೂರಿನ ಜೆಸಿ ನಗರದ ನಿವಾಸಿಗಳಾದ ಲೋಕೇಶ್, ಹರೀಶ್, ಜ್ಯೋತಿಬಾಬು, ಮಂಜುನಾಥ್ ಎಂಬುವರು ಮೃತರು ಎಂದು ಹೇಳಲಾಗುತ್ತಿದೆ.

ಘಟನೆ ವಿವರ: ಜೆಸಿ ನಗರದ 16ನೆ ಮುಖ್ಯರಸ್ತೆಯಲ್ಲಿರುವ ನಳಂದ ಶಾಲೆಯ ಶಿಕ್ಷಕ ದಿನೀಶ್ ಎಂಬವರ ವಿವಾಹ ಕಾರ್ಯಕ್ರಮ ತಮಿಳುನಾಡಿನ ಅರ್ಬು ಕೋಟಿಯಲ್ಲಿ ರವಿವಾರ ಆಯೋಜಿಸಲಾಗಿತ್ತು. ಅದಕ್ಕಾಗಿ ಇವರೆಲ್ಲರೂ ಕಳೆದ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ತೆರಳಿದ್ದರು. ಮುಂಜಾನೆ 4:30ರ ಸಂದರ್ಭದಲ್ಲಿ ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಯನ್ನು ಸರಿಯಾಗಿ ಗುರುತಿಸದೆ ಅದಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ.

ಸ್ಥಳದಲ್ಲೇ ಎಲ್ಲರೂ ಮೃತಪಟ್ಟಿದ್ದು, ಕಾರಿನ ನೋಂದಣಿ ಸಂಖ್ಯೆ ಹಾಗೂ ಅವರ ಬಳಿ ಇದ್ದ ಲಗ್ನಪತ್ರಿಕೆ ಮತ್ತು ಕೆಲವೊಂದು ಗುರುತಿನ ಚೀಟಿಗಳ ಮೂಲಕ ಮೃತರ ಮಾಹಿತಿ ಕಲೆ ಹಾಕಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News