ಬಿ.ಬಸವಲಿಂಗಪ್ಪ ಜಲಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ

Update: 2018-12-07 12:49 GMT

ಬೆಂಗಳೂರು, ಡಿ. 7: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸ್ಥಾಪಿಸಿರುವ ಬಿ.ಬಸವಲಿಂಗಪ್ಪಜಲ ಪರೀಕ್ಷಾ ಪ್ರಯೋಗಾಲಯವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಉದ್ಘಾಟಿಸಿದರು.

ಶುಕ್ರವಾರ ಇಲ್ಲಿನ ನಿಸರ್ಗ ಭವನದಲ್ಲಿ ಸ್ಥಾಪಿಸಿರುವ ಪ್ರಯೋಗಾಲಯವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಬಸವಲಿಂಗಪ್ಪ ಅವರು ಪರಿಸರ ಇಲಾಖೆಯ ಮೊದಲ ಸಚಿವರಾಗಿದ್ದರು. ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದವರು. ಅವರ ಹೆಸರಿನಲ್ಲಿ ಪ್ರಯೋಗಾಲಯ ತೆರೆದಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.

ರಾಜ್ಯದ ಎಂಟು ಸ್ಥಳಗಳಲ್ಲಿ ಜಲ ಪರೀಕ್ಷಾ ಪ್ರಯೋಗಾಲಯ ತೆರೆಯಲಾಗಿದ್ದು, ಶುದ್ಧ ಕುಡಿಯುವ ನೀರಿನ ಬಗ್ಗೆ ಸಂಶೋಧನೆ ನಡೆಸಲು ಈ ಪ್ರಯೋಗಾಲಯ ಸಹಕಾರಿ. ಬೆಂಗಳೂರಿನಲ್ಲಿ ತೆರೆದಿರುವ ಬಸವಲಿಂಗಪ್ಪ ಪ್ರಯೋಗಾಲಯ ಮಾದರಿ ಪ್ರಯೋಗಾಲಯ ಎಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಮತ್ತು ನೀರು ಹೆಚ್ಚು ಕಲುಷಿತಗೊಳ್ಳುತ್ತಿದೆ. ಇದರ ಶುದ್ಧೀಕರಣಕ್ಕೆ ಪ್ರಯೋಗಾಲಯಗಳ ಅಗತ್ಯತೆ ಹೆಚ್ಚಿದೆ. ಸಾರ್ವಜನಿಕರಿಗೆ ಪರಿಸರ ಮತ್ತು ನೀರಿನ ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸರಕಾರಕ್ಕೆ ದಂಡ ಹಾಕುವ ಬೆಳವಣಿಗೆ ಸರಿಯಲ್ಲ

‘ಯಾವ ಆಧಾರದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಸರಕಾರಕ್ಕೆ ದಂಡ ಹಾಕಿದೆ ಎಂದು ತಿಳಿದಿಲ್ಲ. ಆದರೆ, ಸರಕಾರಕ್ಕೆ ದಂಡ ಹಾಕುವ ಬೆಳವಣಿಗೆ ಸರಿಯಲ್ಲ. ಕೆರೆ ವಿಚಾರವಾಗಿ ಎನ್‌ಜಿಟಿಯ ಉದ್ದೇಶ ಸರಿಯೇ ಇದ್ದರೂ, ನಿರ್ವಹಣೆ ವಿಚಾರದಲ್ಲಿ ಸರಕಾರ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಬೆಳ್ಳಂದೂರು ಕೆರೆ ನಿರ್ವಹಣೆಗೆ ಈ ಬಾರಿ 50 ಕೋಟಿ ರೂ.ಮೀಸಲಿಡಲಾಗಿದೆ. ಇದೀಗ ಅದರ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಈ ಸಂದರ್ಭದಲ್ಲಿ ಎನ್‌ಜಿಟಿ ದಂಡ ಹಾಕಿರುವುದು ಸಲ್ಲ. ಎನ್‌ಜಿಟಿ ಒಂದು ತಿಂಗಳ ಗಡುವು ನೀಡಿದೆ. ಅವರ ವ್ಯಾಪ್ತಿ ಎಷ್ಟಿದೆ ಎಂಬುದು ತಿಳಿಯಬೇಕಿದೆ. ದಂಡ ವಿಧಿಸಿರುವ ಸಂಬಂಧ ಎನ್‌ಜಿಟಿ ಅವರ ಲಿಖಿತ ಆದೇಶದ ಪ್ರತಿ ಕೈ ಸೇರಿಲ್ಲ. ಪ್ರತಿ ಸಿಕ್ಕ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು’

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News