ಬೋಗಸ್ ಬಿಲ್ ಸೃಷ್ಟಿ ಪ್ರಕರಣ: ಕಾಂಗ್ರೆಸ್ ಶಾಸಕ ಮುನಿರತ್ನಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-12-14 15:02 GMT

ಬೆಂಗಳೂರು, ಡಿ.14: ಬಿಬಿಎಂಪಿಗೆ ಸೇರಿದ ಸರಕಾರಿ ಕಡತಗಳು ಕಾಂಗ್ರೆಸ್ ಶಾಸಕ ಮುನಿರತ್ನ ಅವರ ಮನೆಯಲ್ಲಿ ಪತ್ತೆಯಾಗಿದ್ದವು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.

ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ, ಚಾರ್ಜ್‌ಶೀಟ್‌ನಲ್ಲಿ ಮುನಿರತ್ನ ಅವರ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ಸರಕಾರದ ಕಡತಗಳನ್ನು ಖಾಸಗಿ ಜಾಗದಲ್ಲಿ ಪರಿಶೀಲನೆ ಮಾಡುವುದು ಎಷ್ಟು ಸರಿ? ಅದರಲ್ಲೂ ಮನೆಗೆ ತೆಗೆದುಕೊಂಡು ಹೋಗುವುದು ಎಷ್ಟು ಸರಿ ಎಂದು ಆಕ್ಷೇಪ ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಲೋಕಾಯುಕ್ತರು ದಾಳಿ ನಡೆಸಿದಾಗ ಎಷ್ಟು ಕಡತಗಳು ಲಭ್ಯವಾಗಿದ್ದವು. ಅವುಗಳಲ್ಲಿ ಎಷ್ಟು ಕಡತಗಳನ್ನು ಪರಿಶೀಲನೆ ಮಾಡಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಸಾವಿರಕ್ಕೂ ಹೆಚ್ಚು ಕಡತಗಳು ಲಭ್ಯವಾಗಿದ್ದವು ಎಂದು ಪೀಠಕ್ಕೆ ವಿವರಣೆ ನೀಡಿದರು. ಬಿಬಿಎಂಪಿ ಬಿಟ್ಟು ಮನೆಯಲ್ಲಿ ಏಕೆ ಪರಿಶೀಲನೆ ನಡೆಸಬೇಕಿತ್ತು ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನೆ ಮಾಡಿದರು. ನೀವು ನೇರವಾಗಿ ಉತ್ತರ ನೀಡಿ. ಸುತ್ತಿ ಬಳಸಿ ಹೇಳಬೇಡಿ. ವಿಧಾನಸೌಧ ಬಿಟ್ಟು ತಾಜ್ ಹೊಟೇಲ್‌ನಲ್ಲಿ ವಿಧಾನಸೌಧದ ಕೆಲಸಗಳನ್ನು ಮಾಡಲು ಆಗುತ್ತಾ. ಇದೊಂದು ಪ್ರಕರಣ ಸಾಕು. ಲೋಕಾಯುಕ್ತರ ಮೇಲೆ ಅನುಮಾನ ಬರಲು. ಲೋಕಾಯುಕ್ತ ಸರಿಯಾಗಿ ತನಿಖೆ ಮಾಡಿರುವುದೇ ಅನುಮಾನ ಎನಿಸುತ್ತಿದೆ ಎಂದು ಗುಡುಗಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶಾಸಕ ಮುನಿರತ್ನಗೆ ತುರ್ತು ನೋಟಿಸ್ ನೀಡಿದ ನ್ಯಾಯಮೂರ್ತಿಗಳು, ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ನಾಲ್ಕು ವಾರಗಳಲ್ಲಿ ಪುನಹ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದರು.

ಪ್ರಕರಣವೇನು: 2014 ಜನವರಿ 26 ರಂದು ವೈ. ಎಚ್.ಶ್ರೀನಿವಾಸ್ ಎಂಬುವರು, ವೈಯಾಲಿ ಕಾವಲ್‌ನಲ್ಲಿ ಮುನಿರತ್ನ ಪತ್ನಿ ಮಂಜುಳಾಗೆ ಸೇರಿದ ಮನೆಯಲ್ಲಿ ಬಿಬಿಎಂಪಿ ಕಾಮಗಾರಿಗಳ ಬೋಗಸ್ ಬಿಲ್ ಸಷ್ಟಿಸಲಾಗುತ್ತಿದೆ ಎಂದು ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರು 27 ಜನವರಿ 2014 ರಂದು ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಸಹ ನಡೆಸಿದ್ದರು. ಈ ವೇಳೆ ಮೂವರು ಬಿಬಿಎಂಪಿ ಇಂಜಿನಿಯರ್‌ಗಳು ಮತ್ತು ನಾಲ್ಕಕ್ಕೂ ಹೆಚ್ಚು ಮಂದಿ ಬಿಬಿಎಂಪಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ಅಂದು ರಾತ್ರಿ ದಾಳಿ ಮಾಡಿದಾಗ ಅಧಿಕಾರಿಗಳೆಲ್ಲಾ ಸೇರಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಗದಿರುವ ಕಾಮಗಾರಿಗಳಿಗೆ ಬೋಗಸ್ ಬಿಲ್ ಮಾಡುತ್ತಿರುವುದು ಪತ್ತೆಯಾಗಿತ್ತು. ಅಲ್ಲದೆ ಮತ್ತೆ ಕೆಲವು ನಕಲಿ ಬಿಲ್‌ಗಳಿಗೆ ಬಿಲ್ ಪಾಸ್ ಆಗಿರುವುದು ಸಹ ಗೊತ್ತಾಗಿತ್ತು. ಅಲ್ಲದೇ ದಾಳಿಯ ವೇಳೆ ಬಿಬಿಎಂಪಿಗೆ ಸೇರಿದ್ದ ಅಧಿಕೃತ 1300 ದಾಖಲೆಗಳು ಪತ್ತೆಯಾಗಿದ್ದವು ಎನ್ನಲಾಗುತ್ತಿದೆ.

ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು 2014 ರಿಂದ 2017ರ ತನಕ ತನಿಖೆ ಮಾಡಿ 30 ಆಗಸ್ಟ್ 2017 ರಂದು 120 ಕೋಟಿ ಹಗರಣ ಆರೋಪದ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, 8 ಮಂದಿಯ ವಿರುದ್ಧ(ಆರು ಮಂದಿ ಅಧಿಕಾರಿಗಳು ಹಾಗೂ ಎರಡು ಮಂದಿ ಕಾಂಟ್ರಾಕ್ಟರ್) ಆರೋಪ ಪಟ್ಟಿ ಸಲ್ಲಿಸಿತ್ತು. ಸದ್ಯ ಪ್ರಕರಣ ಲೋಕಾಯುಕ್ತ ಕೋರ್ಟ್‌ನಲ್ಲಿದೆ. ಪ್ರಕರಣದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳು ಹಾಲಿ ಶಾಸಕ ಮುನಿರತ್ನ ಮತ್ತು ಪತ್ನಿ ಮಂಜುಳಾ ಮುನಿರತ್ನ ಹಾಗೂ ಸೂರಪ್ಪ ಬಾಬು ಎಂಬುವರನ್ನ ಕೈ ಬಿಟ್ಟು ಎಫ್‌ಐಆರ್ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸ್ವತಃ ಮುನಿರತ್ನ ಪತ್ನಿ ಮಂಜುಳಾ ಹೆಸರಿನಲ್ಲಿ ವೈಯಾಲಿ ಕಾವಲ್ ಮನೆಯಲ್ಲಿ ದಾಖಲೆಗಳು ಸಿಕ್ಕಿದ್ದವು. ಅದು ಅಲ್ಲದೇ, ಅದು ಮುನಿರತ್ನ ಕಾರ್ಪೊರೇಟರ್ ಆಗಿದ್ದ ವಾರ್ಡ್ ಮತ್ತು ಮುನಿರತ್ನ ಶಾಸಕ ಆಗಿದ್ದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿಗಳ ಬೋಗಸ್ ಬಿಲ್ಲಿಂಗ್ ಆದರೂ ಸಹ ಕೇಸ್‌ನಲ್ಲಿ ಅವರ ಪಾತ್ರವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು ಎಂಬ ಆರೋಪವಿದೆ.

ವಿಧಾನಸೌಧ ಬಿಟ್ಟು ತಾಜ್ ಹೊಟೇಲ್‌ನಲ್ಲಿ ವಿಧಾನಸೌಧದ ಕೆಲಸಗಳನ್ನು ಮಾಡಲು ಆಗುತ್ತಾ. ಇದೊಂದು ಪ್ರಕರಣ ಸಾಕು. ಲೋಕಾಯುಕ್ತರ ಮೇಲೆ ಅನುಮಾನ ಬರಲು. ಲೋಕಾಯುಕ್ತ ಸರಿಯಾಗಿ ತನಿಖೆ ಮಾಡಿರುವುದೇ ಅನುಮಾನ ಎನಿಸುತ್ತಿದೆ.

-ಪಿ.ಎಸ್.ದಿನೇಶ್‌ ಕುಮಾರ್, ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News