ಜ.8-9 ರ ಸಾರ್ವತ್ರಿಕ ಮುಷ್ಕರ ಬೆಂಬಲಿಸಲು ಮನವಿ: ಕರಪತ್ರ ಹಂಚಿಕೆ ಮಾಡಿ ಪ್ರಚಾರ

Update: 2019-01-02 16:39 GMT

ಬೆಂಗಳೂರು, ಜ.2: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ, ಜನ ವಿರೋಧಿ, ಹಾಗೂ ದೇಶ ವಿರೋಧಿ ನೀತಿಗಳ ವಿರುದ್ದ ಜ.8 ಮತ್ತು 9 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿಂದು ಕರಪತ್ರ ಹಂಚಿಕೆ ಮಾಡುವ ಮೂಲಕ ಪ್ರಚಾರ ನಡೆಸಲಾಯಿತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ವತಿಯಿಂದ ನಡೆಯಲಿರುವ ಸಾರ್ವತ್ರಿಕ ಮುಷ್ಕರ ಭಾಗವಾಗಿ ಸಿಐಟಿಯು, ಐಎನ್‌ಟಿಯುಸಿ, ಎಐಟಿಯುಸಿ, ಎಐಯುಟಿಯುಸಿ ಸೇರಿದಂತೆ ಮತ್ತಿತರೆ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಮುಷ್ಕರಕ್ಕೆ ಸಹಕಾರ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಕೆ.ಪ್ರಕಾಶ್, ದೇಶದ ಸಾರ್ವಜನಿಕ ಸಂಸ್ಥೆಗಳು, ರೈಲ್ವೆ, ಆರೋಗ್ಯ, ಶಿಕ್ಷಣ, ಜಲ ಹಾಗೂ ಅಂಚೆ, ಬ್ಯಾಂಕ್, ವಿಮಾ, ಟೆಲಿಕಾಂ, ಇಂಧನ, ಸಾರ್ವಜನಿಕ ಸಾರಿಗೆ ಮತ್ತು ಕೈಗಾರಿಕೆಗಳು, ಅಂಗನವಾಡಿ, ಬಿಸಿಯೂಟ ಸೇರಿದಂತೆ ಅನೇಕ ಸಂಸ್ಥೆಗಳು, ಯೋಜನೆಗಳನ್ನು ಖಾಸಗೀಸಕರಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಈ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ದೇಶಕ್ಕೆ ಅನ್ನ ಕೊಡುವ ರೈತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಯನ್ನು ಮಾಡುವ ನೌಕರರು, ಕೂಲಿಯನ್ನು ನಂಬಿರುವ ಕೃಷಿ ಕೂಲಿ ಕಾರ್ಮಿಕರು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ದೇಶದ ಯುವಜನರನ್ನು ಬಾಧಿಸುತ್ತಿದೆ, ಅಗತ್ಯ ವಸ್ತುಗಳ ಮತ್ತು ಸೇವೆಗಳಾದ ಆಹಾರ, ವಸತಿ, ಇಂಧನ, ಶಿಕ್ಷಣ, ಆರೋಗ್ಯ ಮತ್ತಿತರೆಗಳ ಬೆಲೆ ಅತ್ಯಂತ ದುಬಾರಿಯಾಗಿದೆ. ನೋಟ್ ಬ್ಯಾನ್ ಸಮತ್ತು ಜಿಎಸ್ಟಿಯಂತಹ ಅನರ್ಥಕಾರಿ ಆರ್ಥಿಕ ಕ್ರಮಗಳಿಂದಾಗಿ ದೇಶದ ಆಂತರಿಕ ಉತ್ಪಾದನೆಯಲ್ಲಿ ತೀವ್ರ ಕುಸಿತಗೊಂಡಿದೆ ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹಂಚಬೇಕು. ಆರ್ಥಿಕ ಹಿಂಜರಿತವಿರುವ ವಲಯಗಳಲ್ಲಿ ಉದ್ಯೋಗಕ್ಕೆ ರಕ್ಷಣೆ ಕೊಡಲು ಸಕಾರಾತ್ಮಕವಾದ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಮೂಲ ಸೌಕರ್ಯ ವ್ಯವಸ್ಥೆಗಳಲ್ಲಿ ಸರಕಾರದ ಹೂಡಿಕೆಯನ್ನು ಹೆಚ್ಚು ಮಾಡಬೇಕು. ಉದ್ದಿಮೆದಾರರಿಗೆ ಉತ್ತೇಜಕ ಪ್ಯಾಕೇಜ್‌ಗಳನ್ನು ಕೊಟ್ಟು ಹಣ ತೊಡಗಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಕೆ.ಎನ್.ಉಮೇಶ್ ಮಾತನಾಡಿ, ಸ್ವಾತಂತ್ರ ಬಂದು 63 ವರ್ಷಗಳಾದರೂ ದೇಶದಲ್ಲಿ ಕಾರ್ಮಿಕ ಕಾನೂನುಗಳು ಜಾರಿಯಾಗದಿರುವುದು ದುರಂತ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿವೆ. ಇಂತಹ ಸಂದರ್ಭದಲ್ಲೇ ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆಯನ್ನು ಮಾಡಿ ಇನ್ನಷ್ಟು ಬೆಲೆ ಏರಿಕೆ ಕುಮ್ಮಕ್ಕು ನೀಡಲಾಗಿದೆ. ಕಾರ್ಮಿಕ ವಿರೋಧಿ, ದೇಶವಿರೋಧಿ ನೀತಿಗಳ ವಿರುದ್ಧ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವಾಗಿದೆ ಎಂದು ಹೇಳಿದರು.

ಕಾರ್ಮಿಕ ಕಾಯ್ದೆಗಳನ್ನು ಯಾವುದೇ ರಿಯಾಯಿತಿ ಇಲ್ಲದೆ ಜಾರಿ ಮಾಡಬೇಕು ಹಾಗೂ ಅವುಗಳ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರು ಸಾಮಾನ್ಯ ಕಾರ್ಮಿಕರನ್ನು ಒಳಗೊಂಡ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಅವಶ್ಯಕತೆ ಅನುಗುಣವಾಗಿ ರಾಷ್ಟ್ರೀಯ ನಿಧಿಯನ್ನು ಸ್ಥಾಪಿಸಬೇಕು. ಈ ವಲಯದ ಕಾರ್ಮಿಕರಿಗೆ ಸೌಲಭ್ಯಗಳನ್ನು ಕಲ್ಪಿಸುವಾಗ, ಬಿಪಿಎಲ್, ಎಪಿಎಲ್ ಯೋಜನೆಗಳ ತಾರತಮ್ಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಐಎನ್‌ಟಿಯುಸಿ ಮುಖಂಡ ಪುಟ್ಟಸ್ವಾಮಿ, ಎಐಟಿಯುಸಿ, ಮುಖಂಡ ಹನುಮೇಶ್, ಎಐಯುಟಿಯುಸಿ ಮುಖಂಡ ದೀಪಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News