ಹಜ್‌ ಯಾತ್ರೆ-2019: ರಾಜ್ಯದಿಂದ 6701 ಮಂದಿ ಆಯ್ಕೆ- ಸಚಿವ ಝಮೀರ್‌ ಅಹ್ಮದ್‌

Update: 2019-01-16 12:20 GMT

ಬೆಂಗಳೂರು, ಜ.16: ಭಾರತೀಯ ಹಜ್ ಸಮಿತಿಯು ಪ್ರಸಕ್ತ ಸಾಲಿನ ಹಜ್‌ ಯಾತ್ರೆಗಾಗಿ ರಾಜ್ಯದಿಂದ 6701 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್. ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್‌ ಯಾತ್ರಿಗಳನ್ನು ಲಾಟರಿ(ಖುರ್ರಾ) ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೌದಿ ಅರೇಬಿಯಾ ಸರಕಾರವು ಭಾರತೀಯ ಹಜ್ ಸಮಿತಿಗೆ 1,23,900 ಮಂದಿಯ ಕೋಟಾವನ್ನು ಹಂಚಿಕೆ ಮಾಡಿದೆ. 2011ರ ಜನಗಣತಿಯನ್ನು ಆಧರಿಸಿ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ರಾಜ್ಯಗಳಿಗೆ ಭಾರತೀಯ ಹಜ್ ಸಮಿತಿಯು ಕೋಟಾವನ್ನು ನಿಗದಿ ಮಾಡಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯಕ್ಕೆ 6701 ಮಂದಿಯ ಕೋಟಾವನ್ನು ನಿಗದಿ ಮಾಡಲಾಗಿದ್ದು, ಇಂದು ಲಾಟರಿ ಮೂಲಕ 5884 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಹಜ್ ಸಮಿತಿಯು 13,995 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ 7298 ಪುರುಷರು, 6685 ಮಹಿಳೆಯರು ಹಾಗೂ 12 ಮಕ್ಕಳು ಅರ್ಜಿ ಸಲ್ಲಿಸಿದ್ದರು ಎಂದು ಝಮೀರ್‌ ಅಹ್ಮದ್‌ ಖಾನ್ ತಿಳಿಸಿದರು.

70 ವರ್ಷ ಮೇಲ್ಪಟ್ಟವರ ಮೀಸಲಾತಿ ಪ್ರವರ್ಗದಲ್ಲಿ 794 ಅರ್ಜಿದಾರರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರ ಮೀಸಲಾತಿ ಪ್ರವರ್ಗದಲ್ಲಿ 23 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಯಾರಿಗೆ ಹಜ್‌ ಯಾತ್ರೆಗೆ ಹೋಗಲು ಅವಕಾಶ ಸಿಗಲಿಲ್ಲವೋ ಅವರು ನಿರಾಶೆಗೊಳ್ಳುವುದು ಬೇಡ. ಸರ್ವಶಕ್ತನಾದ ಅಲ್ಲಾಹ್ ಯಾರನ್ನು ಬೇಕೋ ಅವರನ್ನು ತನ್ನ ಮನೆಯ ದರ್ಶನ ಪಡೆಯಲು ಕರೆಯುತ್ತಾನೆ. ಹೈದರಾಬಾದಿನ ನಿಝಾಮರು ಕೋಟ್ಯಂತರ ರೂ.ಗಳನ್ನು ಪವಿತ್ರ ಮಕ್ಕಾ ಹಾಗೂ ಮದೀನಾಗಳಿಗೆ ನೀಡಿದ್ದಾರೆ. ಆದರೆ, ಅವರಿಗೆ ಹಜ್‌ ಯಾತ್ರೆ ಕೈಗೊಳ್ಳುವ ಅವಕಾಶ ಸಿಗಲಿಲ್ಲ ಎಂದು ಝಮೀರ್‌ ಅಹ್ಮದ್‌ ಖಾನ್ ಹೇಳಿದರು.

ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗದವರು ಯಾವುದೇ ಕಾರಣಕ್ಕೂ ಯಾರ ಮೂಲಕವೂ ಒತ್ತಡ ಹೇರುವ ಪ್ರಯತ್ನವನ್ನು ಮಾಡಬೇಡಿ. ಆನ್‌ಲೈನ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾರ ಹಸ್ತಕ್ಷೇಪಕ್ಕೂ ಅವಕಾಶವಿಲ್ಲ ಎಂದು ಝಮೀರ್‌ ಅಹ್ಮದ್ ಖಾನ್ ಹೇಳಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಆರ್.ರೋಷನ್‌ ಬೇಗ್ ಮಾತನಾಡಿ, ದೇಶದಲ್ಲೆ ಮಾದರಿಯಾದ ಹಜ್ ಕ್ಯಾಂಪ್ ಅನ್ನು ನಮ್ಮ ರಾಜ್ಯದಲ್ಲಿ ನಡೆಸಲಾಗುತ್ತಿದೆ. ಯಾತ್ರಿಗಳಿಗೆ ಸೂಕ್ತವಾದ ತರಬೇತಿ, ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ನಮ್ಮ ರಾಜ್ಯದ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿರುವ ಹಜ್‌ ಭವನವು ಇಡೀ ದೇಶಕ್ಕೆ ಮಾದರಿ. 100 ಕೊಠಡಿಗಳು ಅದರಲ್ಲಿದ್ದು, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಹೊರ ಜಿಲ್ಲೆಗಳು, ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ತಂಗಲು ಇದರಲ್ಲಿ ಅವಕಾಶ ಮಾಡಿಕೊಡಲಾಗುವುದು. ವರ್ಷದ ಎಲ್ಲ ದಿನಗಳಲ್ಲೂ ಹಜ್ ಭವನ ಸಕ್ರಿಯವಾಗಿರಬೇಕು ಎಂಬುದು ನಮ್ಮ ಬಯಕೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ರಹೀಮ್‌ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್‌ ಅಹ್ಮದ್, ಕೆ.ಅಬ್ದುಲ್ ಜಬ್ಬಾರ್, ಶಾಸಕಿ ಕನೀಝ್ ಫಾತಿಮಾ, ಮೌಲಾನ ಲುತ್ಫುಲ್ಲಾ ಮಝ್ಹರ್ ರಶಾದಿ, ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಮುಝಮ್ಮಿಲ್, ಮೌಲಾನ ಶಾಯರ್ ಅಲಿ, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್‌ ಖಾನ್, ನೋಡಲ್ ಅಧಿಕಾರಿ ಸೈಯ್ಯದ್ ಏಜಾಝ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News