ಸರ್ವಾಧಿಕಾರ ಅಳಿಸಿ, ಪ್ರಜಾಪ್ರಭುತ್ವ ಉಳಿಸುವುದು ಮಮತಾ ರ‍್ಯಾಲಿ ಉದ್ದೇಶವಾಗಿತ್ತು: ಹೀಗೆಂದವರು ಬಿಜೆಪಿ ಸಂಸದ!

Update: 2019-01-21 05:55 GMT

ಪಾಟ್ನಾ, ಜ.21: ಮೋದಿ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಇತ್ತೀಚೆಗೆ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನಡೆಸಿದ ವಿರೋಧ ಪಕ್ಷಗಳ ಬೃಹತ್ ರ್ಯಾಲಿಯನ್ನು, "ಪ್ರಜಾಪ್ರಭುತ್ವ ಸಂರಕ್ಷಿಸುವ ಉದ್ದೇಶದ ರ್ಯಾಲಿ" ಎಂದು ಬಣ್ಣಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ನಾಶವಾಗುತ್ತಿರುವುದನ್ನು ತಡೆದು, ಪ್ರಜಾಪ್ರಭುತ್ವ ರಕ್ಷಿಸುವ ನಿಟ್ಟಿನಲ್ಲಿ ಈ ರ್ಯಾಲಿಯಲ್ಲಿ ತಾವು ಪಾಲ್ಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಪಟ್ನಾಸಾಹಿಬ್ ಸಂಸದರಾಗಿರುವ ಚಿತ್ರನಟ, ರ್ಯಾಲಿಯಲ್ಲಿ ಪಾಲ್ಗೊಂಡದ್ದು ಮಾತ್ರವಲ್ಲದೇ, ಮೋದಿ ಮತ್ತು ಅಮಿತ್ ಶಾ ನಾಯಕತ್ವದ ಸರ್ವಾಧಿಕಾರಿ (ತಾನ್‌ಶಾಹಿ) ಧೋರಣೆ ಬಗ್ಗೆ ವಾಗ್ದಾಳಿ ನಡೆಸಿದ್ದರು. ಅಟಲ್- ಆಡ್ವಾಣಿ ಯುಗದಲ್ಲಿ ಇದ್ದ ಲೋಕಶಾಹಿ (ಪ್ರಜಾಪ್ರಭುತ್ವ) ಬದಲು ಇದೀಗ ತಾನ್‌ಶಾಹಿ ವಿಜೃಂಭಿಸುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ಹಲವು ಟ್ವೀಟ್‌ಗಳನ್ನು ಮಾಡುವ ಮೂಲಕ ಬಿಜೆಪಿ ನಾಯಕರನ್ನು ಕೆರಳಿಸಿದ್ದಾರೆ.

ಪರಿವರ್ತನೆಯ ಪರವಾಗಿ ಎಷ್ಟೊಂದು ದೊಡ್ಡ ಸಂಖ್ಯೆಯ ಜನ ಸ್ವಯಂಪ್ರೇರಿತರಾಗಿ ಆಗಮಿಸಿದ್ದರು! ಎಂದು ಮೊದಲ ಟ್ವೀಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ನಡೆದ ಈ ರ್ಯಾಲಿಯಲ್ಲಿ 22 ವಿರೋಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

"ದೇಶದ ಮೂಲೆಮೂಲೆಗಳಿಂದ ಪ್ರಬಲ ಹಾಗೂ ಪ್ರಭಾವಿ ರಾಜಕೀಯ ಮನಸ್ಸುಗಳನ್ನು ಆಕರ್ಷಿಸಿ ಒಂದೇ ವೇದಿಕೆಯಲ್ಲಿ, ನಾಶವಾಗುತ್ತಿರುವ ಪ್ರಜಾಪ್ರಭುತ್ವ ಉಳಿಸುವ ಒಂದೇ ಉದ್ದೇಶದಿಂದ ಸೇರಿಸಿದ ಕೀರ್ತಿ ನಮ್ಮ ಸಹೋದರಿ, ಬಂಗಾಳದ ಶ್ರೇಷ್ಠ ನಾಯಕಿ, ಬೆಂಕಿಚೆಂಡು ಮಮತಾ ದೀ ಅವರಿಗೆ ಸಲ್ಲಬೇಕು" ಎಂದು ಎರಡನೇ ಟ್ವೀಟ್‌ನಲ್ಲಿ ಸಿನ್ಹಾ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News