ಬೋರ್‌ವೆಲ್ ನೀರು ಅಪಾಯಕಾರಿ ವಿಷಕಾರಕಗಳಿಂದ ಕೂಡಿದೆ: ತಜ್ಞರ ಆತಂಕ

Update: 2019-01-22 16:46 GMT

ಬೆಂಗಳೂರು, ಜ.22: ಬೆಂಗಳೂರು ನಗರದಲ್ಲಿ ಇದೀಗ ಬಳಕೆಯಲ್ಲಿರುವ ಬೋರ್‌ಗಳಲ್ಲಿಂದ ಸಿಗುತ್ತಿರುವ ನೀರು ಅತ್ಯಂತ ಅಪಾಯಕಾರಿ ವಿಷಕಾರಕಗಳಿಂದ ಕೂಡಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೋರ್‌ವೆಲ್‌ಗಳ ನೀರಿನ ಸೇವನೆಯಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಮತ್ತು ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಸರಕಾರಕ್ಕೆ ಪತ್ರ ಬರೆದಿವೆ. ನಗರದಲ್ಲಿ ಹಲವು ಬೋರ್‌ಗಳಲ್ಲಿ ಸಿಗುತ್ತಿರುವ ನೀರಿನಲ್ಲಿ ಅಧಿಕ ಲವಣಾಂಶ ಮತ್ತು ವಿಷಕಾರಿ ಅಂಶಗಳಿಂದ ಕೂಡಿದೆ. ಇದರಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಲ್ಲದೆ ಈಗ ಬಳಸುತ್ತಿರುವ ನೀರು ಅತ್ಯಂತ ತಳಮಟ್ಟದ್ದಾಗಿದ್ದು, ಪಳೆಯುಳಿಕೆಗಳಲ್ಲಿ ಸಂಗ್ರಹವಾಗಿರುವ ಸಹಸ್ರಾರು ವರ್ಷಗಳ ನೀರಾಗಿದೆ. ಇದರ ಬಳಕೆ ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಸರಕಾರ ಕೂಡಲೇ ಬೋರ್‌ವೆಲ್ ನೀರಿನ ಬಳಕೆಯನ್ನು ತಡೆಯುವುದರ ಜತೆಗೆ ನೀರಿನ ಕೊರತೆಯನ್ನು ನೀಗಿಸಲು ಪರ್ಯಾಯ ಮಾರ್ಗವನ್ನು ಅನುಸರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನಗರದಲ್ಲಿ ಜನವರಿಯ ನಂತರ ನೀರಿಗೆ ತೀವ್ರ ಬರ ಎದುರಾಗುವ ಸಾಧ್ಯತೆ ಇದೆ. ಟ್ಯಾಂಕರ್‌ಗಳ ಮೂಲಕವೂ ನೀರು ಸರಬರಾಜು ಮಾಡಲು ಕಷ್ಟದ ಸ್ಥಿತಿ ಎದುರಾಗಬಹುದಾಗಿದೆ. ಆದುದರಿಂದ ಅಪಾರ್ಟ್‌ಮೆಂಟ್, ಹಾಸ್ಟೆಲ್ ಸೇರಿದಂತೆ ಬಹುಜನ ವಾಸಿಸುವ ಪ್ರದೇಶಗಳಲ್ಲಿ ನೀರು ಮರು ಬಳಕೆ ಮಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೆ, ಹೆಚ್ಚು ಜನ ನೆಲೆಸಿರುವ ಕಟ್ಟಡಗಳಲ್ಲಿ ನೀರು ಸಂಸ್ಕರಣಾ ಘಟಕಗಳನ್ನು ತೆರೆಯುವುದನ್ನು ಕಡ್ಡಾಯಗೊಳಿಸಿ, ಜಲನೀತಿಯನ್ನು ಜಾರಿಗೆ ತರಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ನೀರು ಮರುಬಳಕೆಯಾಗಲಿ: ಪ್ರತಿದಿನ ಶೌಚಾಲಯದಲ್ಲಿ ಅಧಿಕವಾದ ನೀರನ್ನು ವ್ಯರ್ಥ ಮಾಡಲಾಗುತ್ತದೆ. ಒಂದು ದಿನಕ್ಕೆ ಒಬ್ಬ ವ್ಯಕ್ತಿ ಕನಿಷ್ಠ ನಾಲ್ಕರಿಂದ ಐದು ಬಾರಿ ಶೌಚಕ್ಕೆ ಹೋದರೆ, ಪ್ರತಿ ಬಾರಿ ಫ್ಲಷ್ ಮಾಡಿದಾಗ 2-3 ಲೀಟರ್ ನೀರು ಬರುತ್ತದೆ. ಹೀಗಾಗಿ ದಿನಕ್ಕೆ 10-15 ಲೀಟರ್ ನೀರು ಬೇಕಾಗುತ್ತದೆ. ಇನ್ನು ವಾಹನಗಳನ್ನು ತೊಳೆಯುವುದು, ಲಾನ್‌ಗೆ ನೀರುಣಿಸುವುದು ಹೀಗೆ ನಾನಾ ಕಾರ್ಯಗಳಿಗೆ ಸಾಕಷ್ಟು ನೀರು ವ್ಯರ್ಥವಾಗುತ್ತಿದೆ. ಈ ಕೆಲಸಗಳಿಗೆ ಸಂಸ್ಕರಿಸಿದ ನೀರು ಬಳಸುವಂತಾಗಬೇಕು. ಒಮ್ಮೆ ಬಳಸಿದ ನೀರನ್ನು ಮತ್ತೆ ಮತ್ತೆ ಪುನರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ನೀರಿನ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನಿವಾರಿಸಬಹುದು ಎಂಬ ಸಲಹೆಯನ್ನೂ ನೀಡಲಾಗಿದೆ.

ಸಾಮಾನ್ಯವಾಗಿ 600 ಅಡಿ ಆಳದಲ್ಲಿ ಸಿಗುವ ನೀರು ಅತ್ಯಂತ ಅಪಾಯ ಎಂದು ಪರಿಗಣಿಸಲಾಗಿದೆ. ಇನ್ನು ತಳಮಟ್ಟದ ಫಾಸಿಲ್ ವಾಟರ್ 1,500 ರಿಂದ 1,600 ವರ್ಷಗಳಷ್ಟು ಹಳೆಯದಾಗಿದ್ದು, ಇದರಲ್ಲಿ ಆರೋಗ್ಯಕ್ಕೆ ಹಾನಿಕರವಾದ ಲವಣಾಂಶ ಮತ್ತು ರಾಸಾಯನಿಕಗಳು ಹೆಚ್ಚಾಗಿರುತ್ತವೆ. ಇದೀಗ ಮೂರು ಹಂತದ ನೀರನ್ನು ಬಳಸಿಯಾಗಿದೆ. ಇನ್ನೂ ಅಧಿಕ ನೀರು ತೆಗೆಯಲು ಪ್ರಯತ್ನಿಸಿದರೆ ಬೋರ್‌ವೆಲ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡರೂ ಆಶ್ಚರ್ಯವೇನಿಲ್ಲ ಎಂದು ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News