ಕುಡಿತದ ಚಟದಿಂದ ನಮ್ಮ ಮನೆ, ಹೊಲ ಕಳ್ಕೊಂಡು ಬೀದಿಗಿ ಬಂದೀವಿ: ಕಣ್ಣೀರಿಟ್ಟ ನೊಂದ ಮಹಿಳೆಯರು

Update: 2019-01-30 14:44 GMT

ಬೆಂಗಳೂರು, ಜ.30: ನಮ್ಮ ಗಂಡಂದಿರು, ಮಕ್ಕಳು ಕುಡಿತದ ದಾಸರಾಗಿದ್ದಾರೆ. ಹೊಲ, ಮನೆ ಎಲ್ಲಾ ಕಳ್ಕೊಂಡಿದೀವ್ರಿ, ಊರಾಗ ನಮ್ಮಂಗೆ ಹಲವು ಮಂದಿ ಎಲ್ಲ ಕಳ್ಕೊಂಡು ಬೀದೀಗಿ ಬಂದಾವಿ. ಕೂಲಿ ನಾಲಿ ಮಾಡ್ಕೊಂಡು ಜೀವನ ನಡೆಸ್ತಿದ್ರು ಕುಡಿತದ ಕಾಟ ಇನ್ನೂ ಬಿಟ್ಟಿಲ್ಲ ನೋಡ್ರೀ ಎಂದು ನೊಂದ ಮಹಿಳೆಯರು ಕಣ್ಣೀರಿಟ್ಟ ದೃಶ್ಯಗಳು ಮನಕಲಕುವಂತಿದ್ದವು.

ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಸಾವಿರಾರು ಸಂಖ್ಯೆಯಲ್ಲಿ ಸುಮಾರು 12 ದಿನಗಳ ಕಾಲ ಹಗಲು-ರಾತ್ರಿ, ಬಿಸಿಲು-ಚಳಿ ಎನ್ನದೇ ಪಾದಯಾತ್ರೆಯ ಮೂಲಕ ರಾಜಧಾನಿಗೆ ಬಂದಿದ್ದ ಕೆಲವು ಮಹಿಳೆಯರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ತಮ್ಮ ಸ್ಥಿತಿಯನ್ನು ಬಿಚ್ಚಿಡುವ ಮೂಲಕ ಕಣ್ಣೀರು ಹಾಕಿದರು. ಗಂಡಸರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ಕೊನೆಗೊಂದು ದಿನ ನಮ್ಮನ್ನೆಲ್ಲಾ ಅನಾಥರಾಗಿಸಿ ಸಾಯುತ್ತಿದ್ದಾರೆ ಎಂದು ಹೇಳುತ್ತಲೆ ಬಾಗಲಕೋಟೆಯ ಸುಮಿತ್ರಾ ಎಂಬುವವರು ಕಣ್ಣೀರು ಸುರಿಸಿದರು. ಸರಕಾರ ರೇಷನ್ ಅಂಗಡಿಯಲ್ಲಿ ಉಚಿತ ಅಕ್ಕಿ ಕೊಡ್ತದೆ, ಮತ್ತದೇ ಅಂಗಡಿ ಪಕ್ಕದಲ್ಲಿ ಕಡಿಮೆ ಬೆಲೆಗೆ ಎಣ್ಣೆನೂ ಮಾರಾಟ ಮಾಡ್ತಿದೆ. ಸರಕಾರನೇ ಮದ್ಯಪಾನಕ್ಕೆ ಪ್ರೋತ್ಸಾಹ ಕೊಡುತ್ತಾ, ನಾವೂ ಬಡವರ ಪರ ಎಂದು ಬೋರ್ಡ್ ಹಾಕ್ಕೋತಿದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಗಂಡ ನನ್ ಜತೆಗೆ ಮದುವೆ ಆಗಕ್ಕೂ ಮೊದಲಿನಿಂದಲೂ ಜಗ್ಗ ಕುಡೀತಿದ್ದ. ನಂಗ ಎರಡು ಹೆಣ್ಣು, ಒಂದು ಗಂಡು ಮಗ ಇದಾರ. ನಾನು ಕೂಲಿ ಮಾಡ್ಕೊಂಡು ಬಂದು ಅವರನ್ನ ಶಾಲೆಗೆ ಕಳಿಸ್ತಿದೀನಿ. ಮಗ ಐಟಿಐ ಒದ್ತಿದಾನ, ಮಗಳ ಈಗ ಎಸೆಸ್ಸೆಲ್ಸಿ ಮಾಡ್ತಿದಾಳ. ಆದರೆ, ಮನೆಯಲ್ಲಿ ಗಂಡ ಅವರ ಬಗ್ಗೆ ಏನೇನು ತಲೆ ಕೆಡಿಸಿಕೊಳ್ಳಲ್ಲ. ಅದಕ್ಕ ಹೆಂಡದ ಅಂಗಡಿಗಳೇ ಇಲ್ಲದಂತೆ ಸರಕಾರ ಏನಾದರೂ ಮಾಡಬೇಕು ಸರ. ಅದಕ್ಕಂತೆ ನಾವೀಗ ಇಲ್ಲಿಗೆ ಬಂದಿದೀವಿ ಎಂದು ಬಾದಾಮಿಯಿಂದ ಬಂದಿದ್ದ ಸುವರ್ಣ ನೋವನ್ನು ಹೇಳಿಕೊಂಡರು.

ಈಕೆ ಜೊತೆಗಿದ್ದ ಬೀಮವ್ವ ಮಾತನಾಡಿ, ನಮ್ಮ ಮಕ್ಕಳೇ ಕುಡಿತದ ಚಟ ಅಂಟಿಸಿಕೊಂಡು, ಹೊಲ, ಮನೆ ಎಲ್ಲಾ ಕಳ್ಕೊಂಡವ್ರೆ. ಊರಾಗ ನಮ್ಮಂಗೆ ಹಲವು ಮಂದಿ ಎಲ್ಲಾ ಕಳ್ಕೊಂಡು ಬೀದ್ಯಾಕ್ ಬಂದಾರ. ಕೂಲಿ ನಾಲಿ ಮಾಡಿ ಬದುಕ್ ಕಳಿತೀದೀವಿ ನೋಡ್ರೀ ಸರ ಎಂದು ಗದ್ಗದಿತರಾದರು.

ನನಗೆ ಮದುವೆಯಾದ ಒಂದು ವರ್ಷದಲ್ಲಿ ಗಂಡ ಹೆರಿಗೆಗೆ ಮೊದಲೇ ಈ ಕುಡಿತದ ಚಟದಿಂದ ಏನೇನು ಬರಬಾರದ ಕಾಯಿಲೆಗಳು ಬಂದು ಆತ ತೀರಿಕೊಂಡ. ಇದೀಗ ನಾವು ಅನಾಥರಾಗಿದೀವಿ. ನಾನು ಮತ್ತು ಮಗ ಇಬ್ರೂ ದುಡಿದು ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜಾಪುರದ ಮಾಂತಮ್ಮ ತಮ್ಮ ಅಸಹಾಯಕತೆಯನ್ನು ನೆನೆದು ಬಿಕ್ಕಳಿಸಿ ಅತ್ತರು.

ನನಗೀಗ 27 ವರ್ಷ. ನನ್ನ ಗಂಡ ಕುಡಿದು ಕುಡಿದು ಶಿವನ ಪಾದ ಸೇರಿಕೊಂಡಿದ್ದಾನೆ. ನಾನು ಶಾಲೆಗೆ ಹೋಗಿಲ್ಲ. ತರಕಾರಿ ಮಾರಿ ಮಕ್ಕಳನ್ನು ಸಾಕಬೇಕಾಗಿದೆ. ಜೀವನ ಸಾಗಿಸೋದು ಭಾಳ ಕಷ್ಟ ಆಗೈತಿ. ನಮ್ಮಂತಹ ಎಷ್ಟೊ ಮಂದಿ ಹೆಣ್ಣು ಮಕ್ಕಳು ಇದೇ ರೀತಿ ಸಂಕಷ್ಟದಾಗ ಕೈ ತೊಳೀತಿದ್ದಾರೆ ಎಂದು ಬಳ್ಳಾರಿ ಜಿಲ್ಲೆ ಮಂಗಳ ಎಂಬಾಕೆ ನುಡಿದರು.

ನಾನು ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಓದಿಸ್ತಿದೀನಿ. ಆದರೆ, ಗಂಡ ಮನೆಗೆ ದಿನಾಲೂ ಕುಡಿದು ಬರ್ತಾನೆ. ಕೂಲಿಗೆ ಹೋಗಿ ಮನೆಗೆ ಬಂದರೂ ಎಲ್ಲ ಹಣವನ್ನೂ ಕುಡಿದು ಖರ್ಚು ಮಾಡಿಕೊಂಡು ಬರ್ತಾರೆ. ಇದರಿಂದ ಹೇಗೆ ನಮ್ಮ ಜೀವನ ನಡೆಯುತ್ತದೆ. ಅದಕ್ಕಾಗಿ ಸರಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಬಾದಾಮಿಯ ರತ್ನಮ್ಮ ಮೇಟಿ ಎಂಬ ಮಹಿಳೆ ತಮ್ಮ ಕುಟುಂಬದ ಸಂಕಷ್ಟವನ್ನು ತೋಡಿಕೊಂಡರು.

ಪ್ರತಿಭಟನಾ ನಿರತ ಸಾವಿರಾರು ಮಹಿಳೆಯರು ಸರಕಾರ ಮದ್ಯ ನಿಷೇಧ ಮಾಡಿದರೆ, ನಾವು ಸಂತೋಷಕರ ಬದುಕು ಕಟ್ಟಿಕೊಳ್ಳಬಹುದು. ಹೀಗಾಗಿ, ಕೂಡಲೇ ಸರಕಾರ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಬಾಕ್ಸ್... ಮದ್ಯ ಮಾರಾಟ ಮಾಡುವುದರಿಂದ ಸರಕಾರಕ್ಕೆ ಲಾಭ ಅಂತಾರೆ. ಇದರಿಂದ ಲಕ್ಷಾಂತರ ರೂ. ದುಡಿಯೋ ನಮ್ಮ ಗಂಡು ಮಕ್ಕಳ ಜೀವನವೇ ಹಾಳಾಗುತ್ತಿದೆ. ಅಪ್ಪ-ಮಕ್ಕಳು, ಗಂಡಂದಿರು ದಿನನಿತ್ಯ ಕುಡಿತದ ಅಮಲಿಗೆ ಬಲಿಯಾಗುತ್ತಿದ್ದಾರೆ. ನಮ್ಮಲ್ಲಿ ಜೀವಕ್ಕಿಂತ ಹಣಕ್ಕೆ ಹೆಚ್ಚು ಮಾನ್ಯತೆ ನೀಡುತ್ತಿದ್ದಾರೆ. ನಮ್ಮ ಬದುಕು ಹಾಳಾದರೂ ಇವರು ಚೆನ್ನಾಗಿರಬೇಕು ಎಂದು ನೋಡಿಕೊಳ್ಳುತ್ತಿದ್ದಾರೆ.

-ಹಸೀನಾ ಬೇಗಂ, ರಾಯಚೂರು

ಮಗ ಕುಡಿಯುವುದನ್ನು ಕಲಿತಿದ್ದಾನೆ. ನಮ್ಮನ್ನು ಹೊಡೆದು ಹೊರಗೆ ಕಳಿಸಿದ್ದಾನೆ. ಈಗ ನಾವು ಬೀದಿಯಲ್ಲಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದೇವೆ. ಮಗನ ವರ್ತನೆ ಬಗ್ಗೆ ಹಿರಿಯ ನಾಗರಿಕರ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಬದುಕಲು ಮತ್ತು ಆರೋಗ್ಯಕ್ಕಾಗಿ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ.

-ಜಂಪಣ್ಣ, ಶಿರಾ ತಾಲೂಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News