ಗೋಮೂತ್ರದಿಂದ ಜಾಗತಿಕ ತಾಪಮಾನ ಏರಿಕೆ !

Update: 2019-01-31 07:25 GMT

ಹೊಸದಿಲ್ಲಿ,ಜ.31 : ಉತ್ತಮ ಆರೋಗ್ಯಕ್ಕೆ ಗೋಮೂತ್ರ ಹಲವು ರೀತಿಯಲ್ಲಿ ಸಹಕಾರಿ ಎಂದು  ಭಾರತದಲ್ಲಿ ಕೆಲವೊಂದು ಸಂಘಟನೆಗಳು ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವುದರ ನಡುವೆಯೇ ಗೋಮೂತ್ರ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಬಹುದೆಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಗೋಮೂತ್ರವು ನೈಟ್ರಸ್ ಆಕ್ಸೈಡ್ ಎಂಬ ಅನಿಲವನ್ನು ಹೊರಸೂಸುವುದರಿಂದ ಅದು ಇಂಗಾಲದ ಡೈಆಕ್ಸೈಡ್ ಗಿಂತ 300 ಪಟ್ಟು ಅಧಿಕ ಪ್ರಬಲವಾಗಿದೆ. ಭಾರತದಲ್ಲಿ  ವ್ಯಾಪಕವಾಗಿ ಅವನತಿ ಹೊಂದಿದ ಹುಲ್ಲುಗಾವಲು ಪ್ರದೇಶಗಳಲ್ಲಿ ಗೋಮೂತ್ರ  ಬಳಸಿದಾಗ ಎನ್20 ಅಥವಾ ನೈಟ್ರಸ್ ಆಕ್ಸೈಡ್ ಎಮಿಶನ್  ಮೂರು ಪಟ್ಟು ಅಧಿಕವಾಗುತ್ತದೆ ಎಂದು ಕೊಲಂಬಿಯಾ, ಆರ್ಜೆಂಟಿನಾ, ಬ್ರೆಝಿಲ್, ನಿಕರಾಗುವಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋದಲ್ಲಿ ಇಂಟರನ್ಯಾಷನಲ್ ಸೆಂಟರ್ ಫಾರ್ ಟ್ರಾಪಿಕಲ್ ಅಗ್ರಿಕಲ್ಚರ್, ಕೊಲಂಬಿಯಾ ಇಲ್ಲಿನ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದ್ದು ಈ ಅಧ್ಯಯನದ ವಿವರಗಳು ಹಲವಾರು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಜಾನುವಾರುಗಳು ಗ್ರೀನ್ ಹೌಸ್ ಗ್ಯಾಸ್ ಆಗಿರುವ ಮಿಥೇನ್  ಹೊರಸೂಸುತ್ತವೆ ಹಾಗೂ ಇದು  ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತವೆ ಎಂಬುದು ತಿಳಿದಿದ್ದರೂ, ಗೋಮೂತ್ರ ಕೂಡ  ತಾಪಮಾನ ಏರಿಕೆಗೆ ಕಾರಣವಾಗುತ್ತದೆ ಎಂದು ಇಲ್ಲಿಯ ತನಕ ತಿಳಿದಿರಲಿಲ್ಲ. ತಮ್ಮ ಅಧ್ಯಯನದ ಭಾಗವಾಗಿ ಸಂಶೋಧಕರು 500 ಮಿ.ಲೀ ಗೋಮೂತ್ರವನ್ನು ವಿವಿಧ ಉತ್ತಮ ಹಾಗೂ ನಶಿಸುತ್ತಿರುವ ಹುಲ್ಲುಗಾವಲು ಪ್ರದೇಶಗಳಲ್ಲಿ ಸಿಂಪಡಿಸಿದ್ದರು. ಹೀಗೆ ಏಳು ಹುಲ್ಲುಗಾವಲು ಪ್ರದೇಶಗಳ ಪೈಕಿ ಆರು ನಶಿಸುತ್ತಿರುವ ಹುಲ್ಲುಗಾವಲುಗಳಲ್ಲಿ ನೈಟ್ರಸ್ ಅಕ್ಸೈಡ್ ಪ್ರಮಾಣ ಬಹಳಷ್ಟು ಅಂದರೆ ಮೂರು ಪಟ್ಟು ಅಧಿಕವಾಗಿತ್ತು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಲ್ಲಿ ವಿಶ್ವದಲ್ಲಿಯೇ ಅತ್ಯಧಿಕ ಸಂಖ್ಯೆಯ ಜಾನುವಾರುಗಳಿರುವುದರಿಂದ ಭಾರತದ ಪಾಲಿಗೆ ಈ ಸಂಶೋಧನೆಯ ವಿವರಗಳು ಮಹತ್ವದ್ದಾಗಿದೆ. ಗೋಮೂತ್ರ ಮತ್ತು ಸೆಗಣಿ ಬಳಸಿ ತಯಾರಿಸಲಾದ ಗೊಬ್ಬರ ಇಲ್ಲಿನ ಗದ್ದೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ. ಇಸ್ರೋ 2012ರಲ್ಲಿ ನಡೆಸಿದ ಉಪಗ್ರಹ ಅಧ್ಯಯನದಿಂದ ತಿಳಿದು ಬಂದಂತೆ ಭಾರತದ ಭೌಗೋಳಿಕ ಪ್ರದೇಶದ ಶೇ 30ರಷ್ಟು ಪ್ರದೇಶಗಳು ನಶಿಸುತ್ತಿವೆ ಎಂದು ತಿಳಿಸಿತ್ತು.

"ನಶಿಸುತ್ತಿರುವ ಹುಲ್ಲುಗಾವಲು ಪ್ರದೇಶಗಳು ಆಹಾರ ಭದ್ರತೆಯನ್ನು ಬಾಧಿಸುವ ಹೊರತಾಗಿ ಈಗಿನ ರೈತರ ಜೀವನಾಧಾರ ಹಾಗೂ ಭವಿಷ್ಯದ ರೈತರ ಜೀವನಾಧಾರದ ಮೇಲೆ ಪರಿಣಾಮ ಬೀರುವುದು. ಏಕೆಂದರೆ ಗೋಮೂತ್ರದಿಂದಾಗಿ ಭೂಮಿ ಹೆಚ್ಚು ಹಾನಿಕಾರಕ ಅನಿಲಗಳನ್ನು ಹೊರಸೂಸುವುದರಿಂದ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಬಹುದು'' ಎಂದು ಸಂಶೋಧನಾ ತಂಡದ ಪ್ರಮುಖರಾದ ನ್ಗೊನಿಡ್‍ಝಾಶೆ ಚಿರಿಂಡಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News