ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 6 ಸಾವಿರ ರೂ. ನೆರವು

Update: 2019-02-01 18:23 GMT

ಹೊಸದಿಲ್ಲಿ, ಫೆ.1: ಸಂಸತ್ತಿನಲ್ಲಿ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಿರುವ ವಿತ್ತ ಸಚಿವ ಪಿಯೂಷ್ ಗೋಯೆಲ್, ರೈತರಿಗೆ ಮತ್ತು ಕಾರ್ಮಿಕರಿಗೆ ಬಂಪರ್ ಕೊಡುಗೆ ಪ್ರಕಟಿಸಿದ್ದಾರೆ. 2 ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರರ ಬ್ಯಾಂಕ್ ಖಾತೆಗೆ ನೇರವಾಗಿ 6 ಸಾವಿರ ರೂ. ಮೊತ್ತವನ್ನು ಮೂರು ಕಂತುಗಳಲ್ಲಿ ಜಮೆ ಮಾಡಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ.

 ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಎಂದು ಕರೆಯಲಾಗುವ ಈ ಯೋಜನೆಯಿಂದ 12 ಕೋಟಿಯಷ್ಟು ಸಣ್ಣ ಮತ್ತು ಬಡರೈತರಿಗೆ ಪ್ರಯೋಜನವಾಗಲಿದ್ದು, 2019-20ರ ಸಾಲಿನಲ್ಲಿ ಸರಕಾರಕ್ಕೆ 75 ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ . ಕೃಷಿ ಸಂಬಂಧಿ ಇತರ ಚಟುವಟಿಕೆಗಳಿಗೆ ಈ ಹಣ ನೆರವಾಗಲಿದೆ. ರೈತರು ಗೌರವಯುತ ಜೀವನ ಸಾಗಿಸಲು ಇದರಿಂದ ಸಾಧ್ಯವಾಗುತ್ತದೆ . ಇದಕ್ಕಾಗಿ ಈ ವರ್ಷದ ಬಜೆಟ್‌ನಲ್ಲಿ 75 ಸಾವಿರ ಕೋಟಿ ರೂ. ನಿಗದಿಗೊಳಿಸಿದ್ದು, 2018-19ರ ಸಾಲಿನಲ್ಲಿ ಪರಿಷ್ಕೃತ ಅಂದಾಜು ವಿಭಾಗದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ಗೋಯೆಲ್ ತಿಳಿಸಿದ್ದಾರೆ.

2018-19ರಲ್ಲಿ ರೈತರಿಗೆ ನೀಡಲಾಗಿರುವ ಬೆಳೆ ಸಾಲದ ಮೊತ್ತ 11.68 ಲಕ್ಷ ಕೋಟಿ ರೂ.ಗೆ ಹೆಚ್ಚಿದೆ. ರೈತರಿಗೆ ಮಣ್ಣು ಆರೋಗ್ಯ ಕಾರ್ಡ್, ಗುಣಮಟ್ಟದ ಬಿತ್ತನೆ ಬೀಜ, ನೀರಾವರಿ ಯೋಜನೆ, ಬೇವು ಲೇಪಿತ ಯೂರಿಯಾ ಒದಗಿಸಲಾಗಿದೆ. ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ನೀಡಿರುವ ಕೊಡುಗೆಯ ಸಾರಾಂಶ ಇಲ್ಲಿದೆ.

* ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಲ್ಲಾ 22 ಬೆಳೆಗಳಿಗೂ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚು ದರವನ್ನು ನಿಗದಿಗೊಳಿಸಿ ಕನಿಷ್ಟ ಬೆಂಬಲ ಬೆಲೆ ರೂಪಿಸಲಾಗಿದೆ.

* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯ ಮೂಲಕ 2 ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಬಡ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಬೆಂಬಲ ಬೆಲೆ ನೀಡಲಾಗುವುದು. 2 ಸಾವಿರ ರೂ.ಗಳ ಮೂರು ಕಂತಿನಲ್ಲಿ ಈ ಮೊತ್ತವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಜಮೆಯಾಗುತ್ತದೆ.

* ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2018ರ ಡಿಸೆಂಬರ್ 1ರಿಂದಲೇ ಜಾರಿಗೆ ಬರಲಿದ್ದು , 2019ರ ಮಾರ್ಚ್ 31ರವರೆಗಿನ ಪ್ರಥಮ ಕಂತಿನ ಹಣವನ್ನು ಈ ವರ್ಷವೇ ಪಾವತಿಸಲಾಗುವುದು.

* ರಾಷ್ಟ್ರೀಯ ಕಾಮಧೇನು ಆಯೋಗದ ಸ್ಥಾಪನೆ: ಹಸುಗಳ ತಳಿ ಅಭಿವೃದ್ಧಿಗೆ ಮತ್ತು ಹಸುಗಳ ಉತ್ಪಾದಕತೆ ಸುಧಾರಿಸುವ ಉದ್ದೇಶದಿಂದ ರಾಷ್ಟ್ರೀಯ ಕಾಮಧೇನು ಆಯೋಗದ ಸ್ಥಾಪನೆ. ಹಸುಗಳ ಕಲ್ಯಾಣ ಯೋಜನೆ ಹಾಗೂ ಹಸುಗಳ ಕುರಿತ ಕಾನೂನನ್ನು ಅನುಷ್ಟಾನಗೊಳಿಸುವ ಜವಾಬ್ದಾರಿ ಈ ಆಯೋಗದ್ದಾಗಿದೆ.

* ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಉದ್ಯೋಗ ನಿರ್ವಹಿಸುತ್ತಿರುವ ಕೃಷಿಕರು ಕಿಸಾನ್ ಕ್ರೆಡಿಟ್ ಕಾರ್ಡ್‌ನಡಿ ಸಾಲ ಪಡೆದಿದ್ದರೆ, ಸಾಲದ ಬಡ್ಡಿದರದ ಮೇಲೆ ಶೇ.2ರಷ್ಟು ಸಹಾಯಧನ. ಅಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿಸುವವರಿಗೆ ಹೆಚ್ಚುವರಿಯಾಗಿ ಶೇ.3ರಷ್ಟು ಸಹಾಯಧನ ಒದಗಿಸಲಾಗುವುದು.

* ಇನ್ನಷ್ಟು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ತರುವ ಉದ್ದೇಶದಿಂದ ಸರಳೀಕೃತ ಅರ್ಜಿ ಫಾರಂ ರೂಪಿಸಲಾಗಿದೆ.

* ಪ್ರಾಕೃತಿಕ ವಿಪತ್ತಿನ ಘಟನೆ ಸಂಭವಿಸಿದಾಗ ರೈತರಿಗೆ ಸಾಲ ಮರುಪಾವತಿಸಲು ಕಷ್ಟವಾಗುತ್ತದೆ. ಇದುವರೆಗೆ ಇಂತಹ ಸಂದರ್ಭದಲ್ಲಿ ಸಾಲವನ್ನು ಮರುಹೊಂದಿಸಿ ಪ್ರಥಮ ವರ್ಷ ಶೇ.2ರಷ್ಟು ಸಹಾಯಧನ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಸಹಾಯಧನದ ವ್ಯವಸ್ಥೆ ಸಾಲದ ಅವಧಿಯವರೆಗೂ ಇರುತ್ತದೆ ಮತ್ತು ಸಕಾಲಿಕ ಪಾವತಿದಾರರಿಗೆ ಶೇ.3ರಷ್ಟು ಹೆಚ್ಚುವರಿ ಸಹಾಯಧನ ದೊರೆಯಲಿದೆ.

ವಾರ್ಷಿಕ 5 ಲಕ್ಷ ರೂ.ವರೆಗೆ ತೆರಿಗೆಯ ಆದಾಯ (ಟ್ಯಾಕ್ಸೇಬಲ್ ಇನ್‌ಕಮ್) ಹೊಂದಿದವರಿಗೆ ಆದಾಯ ತೆರಿಗೆಯಲ್ಲಿ ಪೂರ್ಣ ರಿಯಾಯಿತಿ ಘೋಷಿಸಲಾಗಿದೆ. ಅಲ್ಲದೆ ಉಳಿತಾಯ ಯೋಜನೆಗಳ ಮೂಲಕ 1.50 ಲಕ್ಷ ಹೂಡಿಕೆಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇದರಿಂದ ಒಟ್ಟು 6.50 ಲಕ್ಷ ರೂ.ವರೆಗೆ ತೆರಿಗೆ ಪಾವತಿಯಿಂದ ವಿನಾಯಿತಿ ಇದೆ.

ವೇತನದಾರರಿಗೆ ಈಗ ಇರುವ 40 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಆದಾಯ ತೆರಿಗೆ ಹಂತದಲ್ಲಿ ಪ್ರಮುಖ ಬದಲಾವಣೆ ಇರುವುದಿಲ್ಲ. ತಾವು ಪಾವತಿಸಬೇಕಾದ ತೆರಿಗೆಯ ಕುರಿತು ಸಣ್ಣ ತೆರಿಗೆ ಪಾವತಿದಾರರ ಮನದಲ್ಲಿ ವರ್ಷಾರಂಭದಲ್ಲೇ ಖಚಿತತೆ ಇರಬೇಕು ಎಂಬ ಕಾರಣದಿಂದ ಈಗಲೇ ತೆರಿಗೆ ಹಂತದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಜೆಟ್ ಮಂಡಿಸಿರುವ ವಿತ್ತ ಸಚಿವ ಗೋಯೆಲ್ ತಿಳಿಸಿದ್ದಾರೆ.

ನಾಲ್ಕೂವರೆ ವರ್ಷಗಳಲ್ಲಿ ಸರಕಾರ ತೆಗೆದುಕೊಂಡಿರುವ ಪ್ರಮುಖ ತೆರಿಗೆ ಸುಧಾರಣಾ ಕ್ರಮಗಳಿಂದಾಗಿ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ತೆರಿಗೆ ಸುಧಾರಣೆಯಲ್ಲಿ ಸ್ವಲ್ಪ ಲಾಭವನ್ನು ಮಧ್ಯಮ ವರ್ಗದ ಜನತೆಗೆ ವರ್ಗಾಯಿಸಬೇಕಿದೆ. ಆದ್ದರಿಂದ ಮಧ್ಯಮ ವರ್ಗದವರ ಮೇಲಿನ ತೆರಿಗೆ ಹೊರೆಯನ್ನು ಇಳಿಸಲಾಗಿದೆ ಎಂದು ಗೋಯೆಲ್ ತಿಳಿಸಿದ್ದಾರೆ.

ಬಜೆಟ್ ಘೋಷಣೆಯ ಕೆಲವು ಅಂಶಗಳು ಹೀಗಿವೆ.

* ವಾರ್ಷಿಕ 5 ಲಕ್ಷ ರೂ.ವರೆಗಿನ ತೆರಿಗೆ ವಿಧಿಸಬಹುದಾದ ಆದಾಯ ಇರುವವರು ಪೂರ್ಣ ತೆರಿಗೆ ವಿನಾಯಿತಿ ಪಡೆಯಲಿದ್ದು, ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ 6.50 ಲಕ್ಷ ರೂ. ಒಟ್ಟು ಆದಾಯ ಇರುವವರೂ ಪ್ರಾವಿಡೆಂಟ್ ಫಂಡ್, ನಿರ್ದಿಷ್ಟ ಉಳಿತಾಯ, ವಿಮಾ ಪಾಲಿಸಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದರೆ ಆದಾಯ ತೆರಿಗೆ ಪಾವತಿಸಬೇಕಿಲ್ಲ. * ಬ್ಯಾಂಕ್/ ಅಂಚೆಕಚೇರಿಯಲ್ಲಿ ಇಟ್ಟಿರುವ ಠೇವಣಿಯ ಬಡ್ಡಿದರದ ಮೇಲಿನ ಟಿಡಿಎಸ್(ಮೂಲದಲ್ಲಿ ತೆರಿಗೆ ಕಡಿತ)ಮಿತಿಯನ್ನು 10 ಸಾವಿರ ರೂ.ಯಿಂದ 40 ಸಾವಿರ ರೂ.ಗೆ ಏರಿಸಲಾಗಿದೆ. ಅಲ್ಲದೆ ಬಾಡಿಗೆ ಮೊತ್ತದ ಮೇಲಿನ ಟಿಡಿಎಸ್ ಮಿತಿಯನ್ನು 1,80,000 ರೂ.ಯಿಂದ 2,40,000 ರೂ.ವರೆಗೆ ಹೆಚ್ಚಿಸುವ ಪ್ರಸ್ತಾವ ಮಾಡಲಾಗಿದೆ.

* ಒಬ್ಬ ವ್ಯಕ್ತಿ ಎರಡು ಮನೆ ಹೊಂದಿದ್ದರೆ ಈಗ ಕಾಲ್ಪನಿಕ ಬಾಡಿಗೆಯ ಮೇಲಿನ ತೆರಿಗೆ ವಿಧಿಸಲಾಗುತ್ತದೆ. ಆದರೆ ಮಧ್ಯಮವರ್ಗದವರು ಮಕ್ಕಳ ಶಿಕ್ಷಣ, ತಮ್ಮ ಪೋಷಕರ ನಿರ್ವಹಣೆ ಮುಂತಾದ ಕಾರಣಕ್ಕೆ ಎರಡು ಮನೆಗಳನ್ನು ಹೊಂದುವ ಅನಿವಾರ್ಯತೆ ಇರುತ್ತದೆ. ಈ ಕಾರಣಕ್ಕೆ ಸ್ವಯಂ ವಾಸದ ಎರಡು ಮನೆಗಳಿದ್ದವರಿಗೆ ಕಾಲ್ಪನಿಕ ಬಾಡಿಗೆಯ ಮೇಲಿನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

* 2 ಲಕ್ಷ ರೂ.ವರೆಗಿನ ಗೃಹ ಸಾಲದ ಬಡ್ಡಿ, ಶಿಕ್ಷಣ ಸಾಲದ ಬಡ್ಡಿ, ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ, ವೈದ್ಯಕೀಯ ವಿಮೆ, ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚದ ಮೇಲೆ ತೆರಿಗೆ ಪಾವತಿಗೆ ವಿನಾಯಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News