ವಿಪ್ ಉಲ್ಲಂಘಿಸಿ ಜಂಟಿ ಅಧಿವೇಶನಕ್ಕೆ ಹತ್ತಕ್ಕೂ ಹೆಚ್ಚು ಶಾಸಕರು ಗೈರು

Update: 2019-02-06 12:33 GMT

ಬೆಂಗಳೂರು, ಫೆ. 6: ವಿಧಾನ ಮಂಡಲ ಜಂಟಿ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಸರಕಾರದ 10ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿರುವುದು ಹಲವು ಸಂಶಯಗಳನ್ನು ಸೃಷ್ಟಿಸಿದೆ. ಈ ಮಧ್ಯೆಯೆ ವಿಪಕ್ಷ ಬಿಜೆಪಿಯ ಆರು ಮಂದಿ ಶಾಸಕರು ಗೈರು ಹಾಜರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಯಾವುದೇ ‘ಆಪರೇಷನ್ ಕಮಲ’ ಮಾಡುವುದಿಲ್ಲ. ರಾಜ್ಯಪಾಲರ ಭಾಷಣಕ್ಕೂ ನಾವು ಅಡ್ಡಿಪಡಿಸುವುದಿಲ್ಲ ಎಂಬ ವಿಪಕ್ಷ ಯಡಿಯೂರಪ್ಪ ಹೇಳಿಕೆ ಸುಳ್ಳಾಗಿದೆ. ಅಲ್ಲದೆ, ವಿಪ್ ಉಲ್ಲಂಘಿಸಿ ಆಡಳಿತ ಪಕ್ಷದ ಶಾಸಕರೆ ಸದನಕ್ಕೆ ಗೈರಾಗಿರುವುದು ‘ಆಪರೇಷನ್ ಕಮಲ’ದ ಅನುಮಾನವನ್ನು ಮೂಡಿಸಿದೆ.

ವಿಧಾನ ಮಂಡಲ ಜಂಟಿ ಅಧಿವೇಶನ (ಫೆ.6) ಆರಂಭದಿಂದ ಫೆ.15ರ ವರೆಗೆ ಎಲ್ಲ ಸದಸ್ಯರು ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಸರಕಾರದ ಪರ ಮತ ಹಾಕಬೇಕು ಎಂದು ಆಡಳಿತ ಪಕ್ಷದ ಸರಕಾರಿ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ನಿನ್ನೆ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಿದ್ದರು. ಆದರೆ, ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್ ಕ್ಷೇತ್ರ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಮತ್ತು ಡಾ.ಉಮೇಶ್ ಜಾಧವ್(ಚಿಂಚೋಳಿ) ಗೈರು ಹಾಜರಾಗಿದ್ದರು.

ಅಲ್ಲದೆ, ಬಂಧನ ಭೀತಿಯಲ್ಲಿರುವ ಜೆ.ಎನ್.ಗಣೇಶ್(ಕಂಪ್ಲಿ), ಬಿ.ಸಿ.ಪಾಟೀಲ್ (ಹಿರೇಕೆರೂರು), ಡಾ.ಸುಧಾಕರ್(ಚಿಕ್ಕಬಳ್ಳಾಪುರ), ಸೌಮ್ಯರೆಡ್ಡಿ ಹಾಗೂ ಜೆಡಿಎಸ್‌ನ ನಾರಾಯಣಗೌಡ(ಕೆ.ಆರ್.ಪೇಟೆ) ಸೇರಿದಂತೆ 9 ಮಂದಿ ಅಧಿವೇಶನದಿಂದ ದೂರು ಉಳಿದಿದ್ದರು. ಜತೆಗೆ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷೇತರ ಶಾಸಕರಾದ ಆರ್.ಶಂಕರ್(ರಾಣೆಬೆನ್ನೂರು), ನಾಗೇಶ್ (ಮುಳಬಾಗಿಲು) ಅವರು ಜಂಟಿ ಅಧಿವೇಶನಕ್ಕೆ ಗೈರು ಹಾಜರಾಗಿದ್ದು, ಮುಂದೆ ಏನು ಎಂಬ ಕುತೂಹಲ ಸೃಷ್ಟಿಸಿದೆ.

ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಅಥವಾ ಲೇಖಾನುದಾನಕ್ಕೆ ಒಪ್ಪಿಗೆ ಪಡೆದುಕೊಳ್ಳುವ ವೇಳೆ ಅತೃಪ್ತ ಶಾಸಕರನ್ನು ಗೈರುಹಾಜರಾಗುವಂತೆ ಮಾಡುವ ಮೂಲಕ ಸರಕಾರ ಅಸ್ಥಿರಕ್ಕೆ ಬಿಜೆಪಿ ರಣತಂತ್ರ ರೂಪಿಸಿದೆ ಎಂಬ ಸುದ್ದಿ ವಿಧಾನಸಭೆ ಮೊಗಸಾಲೆಯಲ್ಲಿ ಸುಳಿದಾಡುತ್ತಿದೆ.

ಬಿಜೆಪಿ ಶಾಸಕರೂ ಗೈರು: ವರ್ಷದ ಮೊದಲ ಅಧಿವೇಶನಕ್ಕೆ ವಿಪಕ್ಷ ಬಿಜೆಪಿಯ ಡಾ.ಅಶ್ವಥ್ ನಾರಾಯಣ್(ಮಲ್ಲೇಶ್ವರಂ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಎನ್.ಲಿಂಗಣ್ಣ(ಮಾಯಕೊಂಡ), ಬಸನಗೌಡ ಪಾಟೀಲ್ ಯತ್ನಾಳ್ (ವಿಜಯಪುರ ನಗರ), ದೊಡ್ಡನಗೌಡ ಪಾಟೀಲ್(ಹುನಗುಂದ), ಕರುಣಾಕರ ರೆಡ್ಡಿ (ಹರಪ್ಪನಹಳ್ಳಿ) ಸೇರಿದಂತೆ ಆರು ಮಂದಿ ಶಾಸಕರು ಗೈರು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News