ಅವೈಜ್ಞಾನಿಕ ಮಳೆಗಾಲುವೆಗಳ ಕಾಂಕ್ರೀಟ್ ತಡೆಗೋಡೆಯಿಂದ ಪ್ರವಾಹ ಭೀತಿ: ವರದಿ

Update: 2019-02-17 17:51 GMT

ಬೆಂಗಳೂರು, ಫೆ.17: ನಗರದಲ್ಲಿ ಅವೈಜ್ಞಾನಿಕವಾಗಿ ಮಳೆಗಾಲುವೆಗಳಿಗೆ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸುವುದು ಭವಿಷ್ಯದಲ್ಲಿ ಪ್ರವಾಹ ಭೀತಿಗೆ ಕಾರಣವಾಗಲಿದೆ. ನೈಸರ್ಗಿಕ ಕಣಿವೆ ಪ್ರದೇಶವನ್ನು ಪರಿಸರಕ್ಕೆ ಪೂರಕವಾಗಿ ಸಂರಕ್ಷಣೆ ಮಾಡದಿರುವುದು ನಗರಕ್ಕೆ ದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಐಐಎಸ್ಸಿ ಅಧ್ಯಯನ ವರದಿ ಬಹಿರಂಗಪಡಿಸಿದೆ. 

ಬಿಬಿಎಂಪಿ ಕೈಗೆತ್ತಿಕೊಂಡಿರುವ ಮಳೆಗಾಲುವೆಗಳ ಆಧುನೀಕರಣ ಯೋಜನೆಯಿಂದಲೇ ಇಂಥದ್ದೊಂದು ಅನಾಹುತ ಸಂಭವಿಸಲಿರುವುದು ಅಚ್ಚರಿಗೆ ಕಾರಣವಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ಮಳೆಗಾಲುವೆಗಳಿಗೆ ಹೊಸ ರೂಪ ನೀಡುವುದರಿಂದ ನಗರೀಕರಣದ ಮುಂದುವರಿದ ಕೆಲಸವನ್ನಷ್ಟೆ ಮಾಡಲಾಗುತ್ತಿದೆಯೇ ಹೊರತು ಪರಿಸರಕ್ಕೆ ಪೂರಕವಾಗಿಲ್ಲ. ಇದರ ಬದಲು ನೈಸರ್ಗಿಕ ಮಳೆಗಾಲುವೆಗಳಿಗೆ ಯೋಜಿತ ಹಾಗೂ ಪರಿಸರ ಪೂರಕ ನೀತಿ ಅಗತ್ಯ ಎಂದು ವರದಿ ಪ್ರತಿಪಾದಿಸಿದೆ.

ನಗರದಲ್ಲಿ 842 ಕಿ.ಮೀ. ಉದ್ದದಷ್ಟು ಮಳೆಗಾಲುವೆಗಳು ಹರಡಿಕೊಂಡಿವೆ. ಇಷ್ಟೂ ಉದ್ದಕ್ಕೂ ಎರಡೂ ಬದಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವ ಕೆಲಸ ಹಲವು ವರ್ಷಗಳಿಂದ ಸಾಗಿದೆ. ಈವರೆಗೆ 375 ಕಿ.ಮೀ.ನಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಅಂದಾಜು 1 ಸಾವಿರ ಕೋಟಿ ರೂ. ಖರ್ಚಾಗಿದೆ. ಕಳೆದ ವರ್ಷ ಮತ್ತೆ 1200 ಕೋಟಿ ರೂ. ಹಣವನ್ನು ಸರಕಾರ ಬಿಡುಗಡೆ ಮಾಡಿದೆ. ಇತ್ತೀಚಿಗೆ ಮುಂದಿನ 3 ವರ್ಷಕ್ಕೆ 1434.5 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.

ಆದರೆ, ಮಳೆಗಾಲುವೆಗಳು ಸಂಪೂರ್ಣ ಕಾಂಕ್ರೀಟೀಕರಣ ಆಗಲಿದೆ. ಇದರಿಂದ ಹಸಿರು ನಾಶ, ಹವಾಮಾನ ಬದಲಾವಣೆ, ಹಸಿರುಮನೆ ಅನಿಲದ ಮಾಲಿನ್ಯ, ಅಗತ್ಯ ಮೂಲಸೌಕರ್ಯಕ್ಕೂ ತೊಂದರೆ ಆಗಲಿದೆ ಎಂದು ಐಐಎಸ್ಸಿ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅವರ ತಂಡವು ಹೇಳಿದೆ.

ನೈಸರ್ಗಿಕ ಕಣಿವೆಗೂ ಕುತ್ತು: ನಗರದಲ್ಲಿ ಹೆಬ್ಬಾಳ, ಚಲ್ಲಘಟ್ಟ, ಕೋರಮಂಗಲ ಹಾಗೂ ವೃಷಭಾವತಿ ನಾಲ್ಕು ನೈಸರ್ಗಿಕ ಕಣಿವೆಗಳಿವೆ. ಈ ಕಣಿವೆಗಳಿಂದ ಮಳೆಗಾಲುವೆಗಳ ಮೂಲಕ ಮಳೆನೀರು ಕೆರೆಗಳ ಒಡಲು ಸೇರುತ್ತದೆ. ಆದರೆ, ಕಣಿವೆಗಳ ಆರಂಭದಲ್ಲೆ ತ್ಯಾಜ್ಯ ನೀರು ಹರಿಯುತ್ತಿದ್ದು, ಮಳೆಗಾಲುವೆಗಳು ವಿಷವನ್ನು ಹೊತ್ತೊಯ್ಯುವ ಸಾಧನಗಳಾಗಿವೆ. ಇದೀಗ ಮಳೆಗಾಲುವೆಗಳ ಸುತ್ತಲಿನ ಬಫರ್ ವಲಯ ಅತಿಕ್ರಮಣಕ್ಕೆ ಒಳಗಾಗಿದೆ. ಅಲ್ಲಲ್ಲಿ ತಡೆಯುಂಟಾಗಿದ್ದು, ಕಾಲುವೆಗಳ ಬದಿವರೆಗೂ ಕಟ್ಟಡಗಳು ನಿರ್ಮಾಣಗೊಂಡಿವೆ. ಇದರಿಂದ ಪ್ರವಾಹ ಸ್ಥಿತಿ ಉಂಟಾಗಲಿದ್ದು, ತಕ್ಷಣವೇ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವರದಿಯಲ್ಲಿ ಉಲ್ಲೆಖಿಸಲಾಗಿದೆ.

ಆದ್ಯತೆ ಸಿಗಲಿ: 2020ಕ್ಕೆ ಬೆಂಗಳೂರಿನ ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ಕಷ್ಟ. ಹೆಚ್ಚು ನಗರೀಕರಣದಿಂದಾಗಿ ನೀರು ಹಾಗೂ ಆಮ್ಲಜನಕದ ಕೊರತೆ ಕಾಡುತ್ತಿದೆ. ಇದನ್ನು ಗ್ರಹಿಸಿ ಬೃಹತ್ ಕೈಗಾರಿಕೆಗಳನ್ನು ಅನ್ಯ ನಗರಗಳಿಗೆ ಸ್ಥಳಾಂತರಿಸಬೇಕು. ಕೆರೆ-ಕುಂಟೆ, ಉದ್ಯಾನ ಸಂರಕ್ಷಣೆಗೆ ಒತ್ತು ನೀಡಿ ಪರಿಸರ ಉಳಿಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕಿದೆ ಎಂಬ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News