ಬಸ್- ಕಾರು ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಐವರು ಮೃತ್ಯು

Update: 2019-03-05 13:55 GMT

ಬೆಂಗಳೂರು, ಮಾ.5: ಕಾರೊಂದು ನಿಯಂತ್ರಣ ತಪ್ಪಿ ಐರಾವತ ಬಸ್‌ಗೆ ಅಪ್ಪಳಿಸಿ ಉರುಳಿ ಬಿದ್ದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಯಂಡಹಳ್ಳಿಯ ಪಂತರಪಾಳ್ಯ ನಿವಾಸಿಗಳಾದ ಏಳುಮಲೈ(43), ಪತ್ನಿ ಕಮಲಾ(35), ಮಕ್ಕಳಾದ ಗೀತಾ(10), ಕಿರಣ್(13) ಮತ್ತು ಗಿರಿಧರ್(14) ಎಂಬುವರು ಮೃತಪಟ್ಟಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮದ ಬಳಿ ಕಾರು ರಾತ್ರಿ 11 ಗಂಟೆ ಸುಮಾರಿನಲ್ಲಿ ಬರುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿಪಕ್ಕದ ರಸ್ತೆಯಲ್ಲಿ ಬೆಂಗಳೂರಿನಿಂದ ಮಣಿಪಾಲ್ ಗೆ ತೆರಳುತ್ತಿದ್ದ ಐರಾವತ ಬಸ್‌ಗೆ ಅಪ್ಪಳಿಸಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಐದೂ ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಐರಾವತ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ 32 ಪ್ರಯಾಣಿಕರನ್ನು ರಾತ್ರಿ ಕರೆದುಕೊಂಡು ಈ ಮಾರ್ಗವಾಗಿ ಮಣಿಪಾಲ್ ಗೆ ಹೋಗುತ್ತಿದ್ದಾಗ ಅಪಘಾತ ಸಂಬವಿಸಿದ್ದು, ಬಸ್ ಚಾಲಕ ಭೀಮಾರಾಮ್ ಸೇರಿ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.

ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಐದು ಮಂದಿಯ ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಚೇತ್ ಭೇಟಿ ನೀಡಿದರು.

ಈ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News