ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜಸ್ಟೀಸ್ ಫಾರ್ ಅಡ್ವೊಕೇಟ್ ಧರಣಿ ಕಮಿಟಿ ಒತ್ತಾಯ

Update: 2019-03-06 15:51 GMT

ಬೆಂಗಳೂರು, ಫೆ.28: ವಕೀಲೆ ಧರಣಿ ಆತ್ಮಹತ್ಯೆಗೆ ಕಾರಣಕರ್ತರಾದ ಕಾರ್ಪೊರೇಟರ್ ವಿ.ಸುರೇಶನನ್ನು ಕೂಡಲೆ ಬಂಧಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಜಸ್ಟೀಸ್ ಫಾರ್ ಅಡ್ವೊಕೇಟ್ ಧರಣಿ ಕಮಿಟಿ ಒತ್ತಾಯಿಸಿದೆ.

ಬುಧವಾರ ಜಸ್ಟೀಸ್ ಫಾರ್ ಅಡ್ವೊಕೇಟ್ ಧರಣಿ ಕಮಿಟಿ ನೇತೃತ್ವದಲ್ಲಿ ನಗರದ ಮೈಸೂರ್ ಬ್ಯಾಂಕ್ ವೃತ್ತದಿಂದ ಪುರಭವನದ ಮುಂಭಾಗದವರೆಗೂ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾದಲ್ಲಿ, ನೂರಾರು ಸಂಖ್ಯೆಯಲ್ಲಿ ವಕೀಲರು, ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು ಭಾಗವಹಿಸಿ, ವಕೀಲೆ ಧರಣಿ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ನಿರಂತರವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಭಕ್ತವತ್ಸಲಂ, ನಗರದ ಟಿನ್ ಫ್ಯಾಕ್ಟರಿ ಬಳಿ ವಾಸವಿದ್ದ ವಕೀಲೆ ಧರಣಿಯ ಮನೆಯನ್ನು ಕಬಳಿಸಲು ಕಾರ್ಪೊರೇಟರ್ ವಿ.ಸುರೇಶ್ ನಿರಂತರವಾದ ಕಿರುಕುಳ ನೀಡಿದ್ದಾರೆ. ಮಹಿಳಾ ಗೂಂಡಾಗಳನ್ನು, ರೌಡಿಗಳನ್ನು ಧರಣಿ ಮನೆಗೆ ಕಳುಹಿಸಿ ಲೈಂಗಿಕ ಹಿಂಸೆ ನೀಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಕಾರ್ಪೊರೇಟರ್ ವಿ.ಸುರೇಶ್‌ನ ಕಿರುಕುಳದ ವಿರುದ್ಧ ವಕೀಲೆ ಧರಣಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೇ, ಇವರ ವಿರುದ್ಧವೇ ಪ್ರತಿದೂರನ್ನು ದಾಖಲಿಸುವಂತೆ ಆರೋಪಿಗಳಿಗೆ ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಈ ಪೊಲೀಸರನ್ನು ಕೂಡಲೆ ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದರು. ಆತ್ಮಹತ್ಯೆಗೂ ಮುನ್ನ ವಕೀಲೆ ಧರಣಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಆಯೋಗ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಒಳಗೊಂಡಂತೆ 21 ಕಡೆ ದೂರು ಸಲ್ಲಿಸಿದ್ದಾರೆ. ಆದರೆ, ಎಲ್ಲಿಂದಲೂ ನ್ಯಾಯ ಸಿಗುವ ಯಾವುದೇ ಭರವಸೆ ಸಿಕ್ಕಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಂಬಂಧ ಮಾತನಾಡಿದರೆ ಸರಕಾರದ ಘನತೆ ಕಡಿಮೆಯಾಗುತ್ತದೆ ಎಂದು ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲವುಗಳಿಂದ ಮನನೊಂದು ವಕೀಲೆ ಧರಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ವಕೀಲ ಮುನಿಯಪ್ಪ, ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ, ಮಹಿಳಾ ಸಂಘಟನೆಯ ಮಲ್ಲಿಗೆ ಸಿರಿಮನೆ, ಗೌರಿ, ಪದ್ಮಾ, ನೇತ್ರಾವತಿ, ವೌನಿ ಆ್ಯಂಬ್ರೋಸ್, ದೇವರಾಜ್ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನನ್ನ ಮಗಳು ಧರಣಿಗೆ ಕಾರ್ಪೊರೇಟರ್ ವಿ.ಸುರೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಪ್ರತಿ ದಿನ ರಾತ್ರಿ ಮನೆಗೆ ರೌಡಿಗಳನ್ನು ಕಳುಹಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಲ್ಲೆಗಳನ್ನು ಮಾಡಿಸುತ್ತಿದ್ದ. ನನ್ನ ಮಗಳು ವಕೀಲೆಯಾಗಿದ್ದಳು. ಹೀಗಾಗಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಿಗೆ, ಬೇರೆ ಅಧಿಕಾರಿಗಳ ಬಳಿಗೆ ಹೋಗಿ ಪರಿಪರಿಯಾಗಿ ಬೇಡಿಕೊಂಡಳು. ಇದರಿಂದ ಯಾವುದೆ ಪ್ರಯೋಜನ ಆಗಲಿಲ್ಲ. ನಾವು ಮನೆಯನ್ನೆ ಬಿಟ್ಟು ಬೇರೆ ಎಲ್ಲಾದರೂ ಹೋಗಬೇಕೆಂದು ನಿರ್ಧರಿಸಿದ್ದೆವು. ನಮಗೆ ಕೇವಲ ಎರಡು ದಿನ ಕಾಲಾವಕಾಶ ಕೊಟ್ಟಿದ್ದರೆ, ಬೇರೆ ಎಲ್ಲಾದರೂ ಹೋಗಿ ಬದುಕುತ್ತಿದ್ದೆವು. ಕಾರ್ಪೊರೇಟರ್ ಸುರೇಶ್, ಇದಕ್ಕೆ ಅವಕಾಶ ಕೊಡದೆ ರೌಡಿಗಳ ಮೂಲಕ ಲೈಂಗಿಕ ಹಿಂಸೆ ಕೊಡಲು ಮುಂದಾದರು. ಇದಕ್ಕೆ ಮನನೊಂದು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಳು.

-ಧರಣಿಯ ತಾಯಿ

ಹಕ್ಕೊತ್ತಾಯಗಳು:

1.ವಕೀಲೆ ಧರಣಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು.

2.ಕಾರ್ಪೊರೇಟರ್ ವಿ.ಸುರೇಶ್ ಹಾಗೂ ಇತರ ಸಹಚರ ತಪ್ಪಿತಸ್ಥರನ್ನು ಕೂಡಲೆ ಬಂಧಿಸಬೇಕು.

3.ಧರಣಿ ಕುಟುಂಬಕ್ಕೆ ಸರಕಾರ 50 ಲಕ್ಷ ಆರ್ಥಿಕ ನೆರವು ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News