ಬಿಜೆಪಿ ಕಾರ್ಯಕ್ರಮದಲ್ಲಿ 'ಸರ್ಜಿಕಲ್ ಸ್ಟ್ರೈಕ್' ಪ್ರಸ್ತಾಪ
ಬೆಂಗಳೂರು, ಮಾ.14: ಇತ್ತೀಚೆಗೆ ಪಾಕಿಸ್ತಾನದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಬಿಜೆಪಿ ನಾಯಕರು ಸರ್ಜಿಕಲ್ ಸ್ಟ್ರೈಕ್ ಕುರಿತ ವಿಷಯವನ್ನು ಪ್ರಸ್ತಾಪಿಸಿರುವುದು ಬೆಳಕಿಗೆ ಬಂದಿದೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಬಿಜೆಪಿಯ ಚುನಾವಣಾ ನಿರ್ವಹಣೆ ಸಂಚಾಲಕ ಆರ್.ಅಶೋಕ್ ಮಾತನಾಡಿ, ನಮ್ಮ ಸೈನಿಕರ ಸಾವಿಗೆ ಕಾರಣರಾದ ಉಗ್ರರ ಶಿಬಿರಗಳನ್ನು ಪ್ರಧಾನಿ ನರೇಂದ್ರ ಮೋದಿ ಧ್ವಂಸ ಮಾಡಿದರು ಎಂದರು.
ಇದೇ ಧಾಟಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ಶಿಬಿರಗಳನ್ನು ನಾಶ ಮಾಡಿದರೆ ಪ್ರತಿಪಕ್ಷಗಳು ಸತ್ತವರ ಸಂಖ್ಯೆಯನ್ನು ಕೇಳುತ್ತಾರೆ. ಈ ರೀತಿ ಪ್ರಶ್ನೆ ಮಾಡುವವರನ್ನು ನಮ್ಮ ಸೈನಿಕರ ಜೊತೆಗೆ ಆ ಪ್ರದೇಶಕ್ಕೆ ಒಮ್ಮೆ ನೋಡಿಬರಲು ಕಳುಹಿಸಿ ಕೊಡಬೇಕೆಂದು ತಿಳಿಸಿದರು.