‘ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ' ಎಂದು ಕೋರಿದ ಅಪೀಲನ್ನು ಸುಪ್ರೀಂ ಕೋರ್ಟ್ ಹೇಗೆ ನಿಭಾಯಿಸಿತು ಗೊತ್ತೇ?
ಹೊಸದಿಲ್ಲಿ : ದೇಶದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ವ್ಯಕ್ತಿಯೊಬ್ಬರು ಅಪೀಲು ಸಲ್ಲಿಸಿ ಸುದ್ದಿಯಾಗಿದ್ದಾರೆ. ಈ ಪ್ರಕರಣ ಜಸ್ಟಿಸ್ ರೋಹಿಂಟನ್ ನಾರಿಮನ್ ಹಾಗೂ ಜಸ್ಟಿಸ್ ವಿನೀತ್ ಸರನ್ ಅವರಿದ್ದ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಬಾರ್ ಎಂಡ್ ಬೆಂಚ್ ವರದಿಯ ಪ್ರಕಾರ ಈ ಅಪೀಲನ್ನು ನೋಡಿ ಜಸ್ಟಿಸ್ ನಾರಿಮನ್ ಆವರಿಗೆ ಆಘಾತ ಮತ್ತು ಕಳವಳವೂ ಉಂಟಾಗಿತ್ತು. ತಮ್ಮ ಕಕ್ಷಿಗಾರರ ಪರ ಅಪೀಲನ್ನು ಜೋರಾಗಿ ಓದುವಂತೆ ಅವರು ವಕೀಲರಿಗೆ ತಿಳಿಸಿದರು. ವಕೀಲರು ಹಾಗೆಯೇ ಮಾಡಿದಾಗ ನ್ಯಾಯಮೂರ್ತಿ ನಾರಿಮನ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದೇ ಅಲ್ಲದೆ ವಕೀಲರನ್ನುದ್ದೇಶಿಸಿ “ನೀವು ಈ ಪ್ರಕರಣದಲ್ಲಿ ವಾದಿಸುವ ವಿಚಾರದಲ್ಲಿ ಗಂಭೀರತೆ ಹೊಂದಿದ್ದೀರಾ? ನಾವು ವಿಚಾರಣೆ ಕೈಗೊಳ್ಳುತ್ತೇವೆ ಆದರೆ ನಿಮ್ಮ ವಿರುದ್ಧ ಕೆಲವು ನಿರ್ಬಂಧ ಹೇರುತ್ತೇವೆ,'' ಎಂದು ಎಚ್ಚರಿಸಿದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ ವಕೀಲರು ಇಲ್ಲವೆಂದಾಗ ಅರ್ಜಿಯನ್ನು ವಜಾಗೊಳಿಸಲಾಯಿತು.
ಈ ಪ್ರಕರಣವನ್ನು ಜಸ್ಟಿಸ್ ನಾರಿಮನ್ ನಿಭಾಯಿಸಿದ ರೀತಿ ಟ್ವಿಟ್ಟರಿಗರ ಪ್ರಶಂಸೆಗೆ ಒಳಗಾಗಿದೆ.