ಎಲಿವೇಟೆಡ್ ಕಾರಿಡಾರ್ ರದ್ದುಗೊಳಿಸಲು ಪರಿಸರವಾದಿಗಳಿಂದ ಬಿಗಿ ಪಟ್ಟು

Update: 2019-03-16 16:48 GMT

ಬೆಂಗಳೂರು, ಮಾ.16: ರಾಜ್ಯ ಸರಕಾರ ನಿರ್ಮಿಸಲು ಮುಂದಾಗಿರುವ ಎಲಿವೇಟೆಡ್ ಕಾರಿಡಾರ್ ವಿರುದ್ಧ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಒಗ್ಗೂಡಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರಕಾರ ಈ ಕೂಡಲೇ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆ ರದ್ದುಗೊಳಿಸಬೇಕು ಪಟ್ಟು ಹಿಡಿದರು.

ಬಿಎಂಟಿಸಿಯ 6,300 ಬಸ್‌ಗಳು ಕೇವಲ ಶೇ 0.5ರಷ್ಟು ರಸ್ತೆಯ ಜಾಗ ಆಕ್ರಮಿಸಿಕೊಳ್ಳುತ್ತವೆ. ಕಾರುಗಳು ಬಸ್‌ನ ಎರಡು ಸಾವಿರ ಪಟ್ಟು ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತವೆ. ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದು ಬಿಟ್ಟು ಕಾರಿನವರಿಗೆ ದಾರಿ ಮಾಡಲು ಸರಕಾರ ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಒಳ್ಳೆಯ ಕೆಲಸ ಮಾಡಿದ್ದರು. ಆದರೆ, ಇಂದು ಅವರಿಗೆ ಎಲಿವೇಟೆಡ್ ಕಾರಿಡಾರ್ ವ್ಯಸನ ಶುರುವಾಗಿದೆ. ಹಿಂದಿನ ಸರಕಾರ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾದಾಗ ಅವರನ್ನು ಭೇಟಿ ಮಾಡಿದ್ದೆವು. ಅಂದಿನ ಸರಕಾರದ ಕ್ರಮವನ್ನು ಟೀಕಿಸಿದ್ದರು. ಸದ್ಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಆಸಕ್ತಿ ವಹಿಸಿರುವುದು ದುರಂತ ಎಂದು ಟೀಕಿಸಿದರು.

ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದ ನಗರದ ಕಬ್ಬನ್ ಉದ್ಯಾನಕ್ಕೆ ಹಾನಿಯಾಗಲಿದೆ. ಇದು ಕರ್ನಾಟಕದ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಯೋಜನೆಗೆ ಸಂಬಂಧಿಸಿದ ಟೆಂಡರ್ ರದ್ದುಪಡಿಸಬೇಕು ಎಂದು ಪರಿಸರವಾದಿಗಳು ಆಗ್ರಹ ಮಾಡಿದರು.

ಗಮನ ಸೆಳೆದ ಸಹಿ ಸಂಗ್ರಹ

ವಿವಾದಿತ ಎಲಿವೇಟೆಡ್ ಕಾರಿಡಾರ್ ಯೋಜನೆಯು ನಗರದ ಹಸಿರು ನಾಶ ಮಾಡುವುದನ್ನು ವಿರೋಧಿಸಿ ನಡೆಸಿದ ಆನ್‌ಲೈನ್ ಅಭಿಯಾನದಲ್ಲಿ ಒಂದು ಲಕ್ಷದಷ್ಟು ಸಹಿ ಸಂಗ್ರಹ ನಡೆದಿದೆ. ‘ಟೆಂಡರ್ ರದ್ದು ಮಾಡಿ’ ಅಭಿಯಾನಕ್ಕೂ ಸಾವಿರಾರು ನಾಗರಿಕರು ಕೈ ಜೋಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News