ಶ್ರೀನಿವಾಸ್ ಪ್ರಸಾದ್, ಶಾಸಕ ಮಾಧುಸ್ವಾಮಿ ಹೇಳಿಕೆಗೆ ಜೆಡಿಎಸ್ ಮುಖಂಡರು ತಿರುಗೇಟು

Update: 2019-03-19 17:06 GMT

ಬೆಂಗಳೂರು, ಮಾ.19: ಕುಟುಂಬ ರಾಜಕಾರಣ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಚುನಾವಣೆ ಸ್ಪರ್ಧೆ ಬಗ್ಗೆ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಶಾಸಕ ಮಾಧುಸ್ವಾಮಿ ಹೇಳಿಕೆಗೆ ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಟಿ.ಆರ್.ಪ್ರಸಾದ್ ಗೌಡ, ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದಾಗ ಶಾಸಕ ಮಾಧುಸ್ವಾಮಿ ದೇವೇಗೌಡರಿಗೆ ಗೋ ಬ್ಯಾಕ್ ಅನ್ನುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. ದೇಶದ ಮಾಜಿ ಪ್ರಧಾನಿ ಯಾವ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಟೀಕೆ ಮಾಡುವ ಅವಶಕ್ಯತೆ ಇರುವುದಿಲ್ಲ. ಇದನ್ನು ಮತದಾರರು ತೀರ್ಮಾನಿಸುತ್ತಾರೆ. ದೇವೇಗೌಡರ ಬಗ್ಗೆ ಮಾತನಾಡುವವರು ಈ ರಾಜ್ಯಕ್ಕೆ ನಿಮ್ಮ ಕೊಡುಗೆ ಏನಿದೆ ಎಂಬುದನ್ನು ಅರಿತು ನಂತರ ಮಾತನಾಡಿ ಎಂದು ತಿರುಗೇಟು ನೀಡಿದರು.

ಈ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಹೇಳಿಕೆ ನೀಡುವ ಮೂಲಕ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ವಲಯದಲ್ಲಿ ಸಜ್ಜನಿಕೆ ಉಳಿಸಿಕೊಂಡವರೆಂಬ ನಮ್ಮ ಭಾವನೆಯನ್ನು ಸುಳ್ಳು ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರು ಇನ್ನು ಮುಂದಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಗೌರವ ಉಳಿಸಿಕೊಳ್ಳಬೇಕು. ದೇವೇಗೌಡರು ನಿಮಗಿಂತ ಆರೋಗ್ಯವಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸು ಮುಖ್ಯವಲ್ಲ ಉತ್ಸಾಹ ಮುಖ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News