ಯಶ್-ದರ್ಶನ್ ವಿರುದ್ಧ ಟೀಕೆ ಆರೋಪ: ಶಾಸಕ ನಾರಾಯಣಗೌಡ ವಿರುದ್ಧ ದೂರು
ಬೆಂಗಳೂರು, ಮಾ.21: ಕನ್ನಡ ಚಿತ್ರರಂಗದ ನಟರಾದ ದರ್ಶನ್ ಹಾಗೂ ಯಶ್ ವಿರುದ್ಧ ತಮ್ಮ ಭಾಷಣದಲ್ಲಿ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಟೀಕಿಸಿದ್ದಾರೆಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಗುರುವಾರ ವಕೀಲ ನಾರಾಯಣಸ್ವಾಮಿ ಎಂಬುವರು ದೂರು ನೀಡಿದ್ದು, ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಹಾಗೂ ಯಶ್ ಪ್ರಚಾರ ಮಾಡುತ್ತಿದ್ದಾರೆ. ಈ ಕಾರಣಕ್ಕೆ, ಚಿತ್ರರಂಗದವರು ರಾಜಕೀಯಕ್ಕೆ ತಲೆ ಹಾಕಬಾರದು. ಮಂಡ್ಯದಲ್ಲಿ ಪ್ರಚಾರ ಮಾಡಬಾರದು. ನಾವು ಸಿನೆಮಾ ನೋಡಿದ್ರೆ ಅವರು, ಇಲ್ಲದಿದ್ದರೆ ಇಲ್ಲ. ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ. ಆಸ್ತಿ-ಪಾಸ್ತಿ ಎಷ್ಟಿದೆ ಎಂದೆಲ್ಲಾ ಶಾಸಕ ನಾರಾಯಣಗೌಡ ಬಹಿರಂಗವಾಗಿ ಹೇಳಿದ್ದರು.
ಈ ಹಿನ್ನೆಲೆ, ಶಾಸಕರೊಬ್ಬರು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಜನಸಾಮಾನ್ಯರಿಗೆ ಗೊಂದಲದ ವಾತಾವರಣ ಉಂಟು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ನಾರಾಯಣ ಸ್ವಾಮಿ ಆರೋಪಿಸಿ ದೂರು ಸಲ್ಲಿಸಿದ್ದಾರೆ.